ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಮೇ 22 ರಿಂದ 27 ರವರೆಗೆ ಅಂತರ ಗ್ರಾಮ ನಾಲ್ನಾಡ್ ಹಾಕಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ನಾಲ್ನಾಡು ಹಾಕಿ ಪಂದ್ಯಾವಳಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.ಬಲಮಾವಟಿಯ ನೇತಾಜಿ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ 2000 ದಿಂದ 2012 ರವರೆಗೆ ನಾಲ್ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಬಳಿಕ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. 10 ವರ್ಷಗಳ ಬಳಿಕ ಸಾರ್ವಜನಿಕರ ಒತ್ತಾಯದ ಮೇರೆಗೆ ಹೊಸ ಸಮಿತಿ ರಚಿಸಿ ಪಂದ್ಯಾಟ ಆಯೋಜಿಸಲಾಗುತ್ತಿದೆ.
ನಾಲ್ನಾಡು ಕಪ್ ಹಾಕಿ ಪಂದ್ಯಾಟವನ್ನು ಮೊತ್ತ ಮೊದಲು ಗ್ರಾಮೀಣ ಮಟ್ಟದಲ್ಲಿ ಯಾವುದೇ ಜಾತಿ ಭೇದಗಳಿಲ್ಲದೆ ಮನೋರಂಜನೆಯ ಜೊತೆಗೆ ಹಾಕಿ ಕ್ರೀಡೆಯ ಹೇಳಿಕೆಗಾಗಿ ಅಯೋಜಿಸಿದ ಹೆಗ್ಗಳಿಕೆ ಈ ಸಮಿತಿಯದಾಗಿದ್ದು ಬಳಿಕ ವಿವಿಧಡೆ ಹಾಕಿ ಪಂದ್ಯಾಟಗಳು ಆರಂಭಗೊಂಡವು.ಈ ವ್ಯಾಪ್ತಿಯಲ್ಲಿ ಬಹಳಷ್ಟು ಕ್ರೀಡಾ ಪ್ರತಿಭೆಗಳು ಇದ್ದು ಮನೋರಂಜನೆಯ ಜೊತೆಗೆ ಹಾಕಿ ಕ್ರೀಡೆಯ ಶ್ರೇಯೋಭಿವೃದ್ಧಿಗಾಗಿ ಮುಂದಿನ ವರ್ಷಗಳಲ್ಲಿ ನಿರಂತರವಾಗಿ ಗ್ರಾಮೀಣ ಮಟ್ಟದ ಹಾಕಿ ಪಂದ್ಯಾಟ ಹಾಗೂ ಕೋಚಿಂಗ್ ಕ್ಯಾಂಪ್ ಆಯೋಜಿಸಲಾಗುವುದು ಎಂದರು.
ನಾಲ್ಕು ನಾಡು ವ್ಯಾಪ್ತಿಯ ನಾಪೋಕ್ಲು, ಬಲ್ಲಮಾವಟಿ ಹಾಗೂ ಕಕ್ಕಬೆ, ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ 11 ಗ್ರಾಮಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ. ಈಗಾಗಲೇ 14 ತಂಡಗಳು ನೋಂದಾಯಿಸಿವೆ. ಈ ಪಂದ್ಯಾಟಕ್ಕಾಗಿ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಒಂದು ಲಕ್ಷ ರು. ನಗದು ನೀಡಿದ್ದಾರೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ಮಾಳೆಯಂಡ ಬಿನ್ನು ಅವರು ಅವರ ತಾಯಿಯ ಜ್ಞಾಪಕಾರ್ಥ ಪ್ರಥಮ ಬಹುಮಾನ ಹಾಗೂ ಟ್ರೋಫಿ ಬಹುಮಾನವನ್ನು, ರನ್ನರ್ ಪ್ರಶಸ್ತಿಯನ್ನು ಮೂವೆರೆ ಚಂಗಪ್ಪ ಅವರ ಜ್ಞಾಪಕರ್ತ ಮಂದಣ್ಣ ನವರು ಬಹುಮಾನ ಹಾಗೂ ಟ್ರೋಫಿ ನೀಡಿದ್ದಾರೆ.ಮಹಿಳೆಯರಿಗೂ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಅಂತರ ಗ್ರಾಮ ಮಟ್ಟದ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಈ ಸಂದರ್ಭ ಆಯೋಜಿಸಲಾಗಿದೆ. ಈ ವರ್ಷ ಮೇ 15ರಿಂದ ಪಂದ್ಯಾಟ ಆರಂಭಗೊಳ್ಳಬೇಕಿತ್ತು. ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೇ 22 ರಿಂದ 27ರ ವರೆಗೆ ಪಂದ್ಯಾಟವನ್ನು ಆಯೋಜಿಸಲಾಗುವುದು ಎಂದರು.
ಕಾರ್ಯದರ್ಶಿ ಚಂಗೆಟಿರ ಸೋಮಣ್ಣ ಮಾತನಾಡಿ, ಈ ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹಗ್ಗ ಜಗ್ಗಾಟ ಸ್ಪರ್ಧೆಯ ಪ್ರಥಮ ಬಹುಮಾನವನ್ನು ದಿ. ಚೀಯಂಡಿ ಗಣಪತಿ ಅವರ ಜ್ಞಾಪಕರ್ತ ಅವರ ಮಗ ದಿನೇಶ್ ಅವರು ಹಾಗೂ ದ್ವಿತೀಯ ಬಹುಮಾನವನ್ನು ದಿ.ಮಚ್ಚುರ ಮಂದಣ್ಣ ಅವರ ಜ್ಞಾಪಕಾರ್ಥ ಅವರ ಮಗ ಯದುಕುಮಾರ್ ನೀಡಲಿದ್ದಾರೆ ಎಂದರು.ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಹಾಕಿ ಸಮಿತಿ ಅಧ್ಯಕ್ಷ ಕರವ೦ಡ ಸುರೇಶ್, ಉಪಾಧ್ಯಕ್ಷ ಮಂಡೀರ ನಂದ ನಂಜಪ್ಪ, ಸಹ ಕಾರ್ಯದರ್ಶಿ ಮಚ್ಚುರ ಯದುಕುಮಾರ್, ಸದಸ್ಯರಾದ ಕೋಟೆರ ಬೋಪಣ್ಣ, ಐರಿರ ವೇಣು ಟಿಮ್ಸ, ಬದಂಚೆಟ್ಟಿರ ದೇವಯ್ಯ, ತೋಲಂಡ ಅರುಣ, ಗ್ರಾಮ ಪಂಚಾಯಿತಿ ಉಪ ಅಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಮಾಲೆಯಂಡ ವಿನು , ಕರವಂಡ ಸಜನ್, ತೋಳಂಡ ಅರುಣ, ಬೈರುಡ ಮಾಚಯ್ಯ, ಪಂಜೆರಿರ ಹರೀಶ್, ಅಪ್ಪಚೆಟ್ಟೋಳಂಡ ಅಯ್ಯಪ್ಪ ಉಪಸ್ಥಿತರಿದ್ದರು.