260 ಮನೆ ಕಳ್ಳತನ ಮಾಡಿ ಊರಿಗೆ ಊಟ ಹಾಕಿದ ಐವರು ಹೆಂಡಿರ ಮುದ್ದಿನ ಕಳ್ಳ ಬಂಧನ

| N/A | Published : Apr 29 2025, 11:43 AM IST

food storage tips

ಸಾರಾಂಶ

ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧೆಡೆ ಕಳ್ಳತನದಲ್ಲಿ ತೊಡಗಿದ್ದ, 260 ಪ್ರಕರಣಗಳಲ್ಲಿ ಪೋಲಿಸರಿಗೆ ಬೇಕಾಗಿದ್ದ ಅಂತಾರಾಜ್ಯ ಕುಖ್ಯಾತ ಮನೆಗಳ್ಳನನ್ನು ಕಲಬುರಗಿ ಪೋಲಿಸರು ಬಂಧಿಸಿದ್ದಾರೆ.

 ಕಲಬುರಗಿ : ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧೆಡೆ ಕಳ್ಳತನದಲ್ಲಿ ತೊಡಗಿದ್ದ, 260 ಪ್ರಕರಣಗಳಲ್ಲಿ ಪೋಲಿಸರಿಗೆ ಬೇಕಾಗಿದ್ದ ಅಂತಾರಾಜ್ಯ ಕುಖ್ಯಾತ ಮನೆಗಳ್ಳನನ್ನು ಕಲಬುರಗಿ ಪೋಲಿಸರು ಬಂಧಿಸಿದ್ದಾರೆ.

ಹೈದ್ರಾಬಾದ್‌- ಸಿಕಂದ್ರಾಬಾದ್‌ ಮೂಲದ ಕಾರು ಚಾಲಕ ಶಿವ ಪ್ರಸಾದ್‌ ಅಲಿಯಾಸ್‌ ಮಂತ್ರಿ ಶಂಕರ್‌ (56) ಬಂಧಿತ.

ಕಲಬುರಗಿಯ ಮನೆಯೊಂದರಲ್ಲಿ ಚಿನ್ನಾಭರಣ ಸೇರಿ ₹14.60 ಲಕ್ಷ ಮೌಲ್ಯದ ವಿವಿಧ ವಸ್ತು ಕದ್ದು ಪರಾರಿ ಆಗಿದ್ದ. ಚಿನ್ನಾಭರಣಗಳಲ್ಲಿ ಕೆಲವನ್ನು ಮಾರಿ ಬಂದ ಹಣದಲ್ಲಿ ಲಾತೂರಿನಲ್ಲಿರುವ ಅನ್ಸಾರಿ ವಾಡಿಯಲ್ಲಿ ಇಡೀ ಊರಿಗೇ ಭೂರಿ ಭೋಜನ ಮಾಡಿಸಿದ್ದ.

ಶಿವಪ್ರಸಾದ್‌ 14ನೇ ವಯಸ್ಸಿಂದಲೇ ಕಳ್ಳತನ ಶುರು ಮಾಡಿದ್ದ. ತಾನು ಕಳವು ಮಾಡಿದ ಹಣದಲ್ಲಿ ದೊಡ್ಡ ನಗರಗಳಿಗೆ ತೆರಳಿ ಮೋಜು ಮಸ್ತಿ ಮಾಡುತ್ತಿದ್ದ. ಅಲ್ಲದೆ ಸಂಸಾರಕ್ಕೂ ಹಣ ಬಳಸುತ್ತಿದ್ದ. ಇದರ ಜೊತೆಗೆ ದೊಡ್ಡ ಮಂದಿರಗಳಿಗೆ ಹೋಗಿ ಅಲ್ಲಿ ಅನ್ನದಾನಕ್ಕೆ, ದೇವಾಲಯದ ನಿಧಿಗೂ ಲಕ್ಷಾಂತರ ರು. ಹಣವನ್ನು ದಾನ ಮಾಡುತ್ತಿದ್ದ. ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅನ್ನದಾನಕ್ಕಾಗಿ ₹5 ಲಕ್ಷವನ್ನೂ ನೀಡಿದ್ದ. ಕಳ್ಳತನದ ಪಾಪಪ್ರಜ್ಞೆಯಿಂದ ದೂರವಾಗಲು ಹೀಗೆ ದಾನ ಧರ್ಮ, ಗುಡಿಗಳಿಗೆ ದೇಣಿಗೆ ನೀಡುತ್ತಿದ್ದೆನೆಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ.

ಆರೋಪಿಯು 5 ಜನರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾನೆ. ನಾಲ್ವರು ಪತ್ನಿಯರು ಆಂಧ್ರ, ತೆಲಂಗಾಣದಲ್ಲೇ ವಾಸವಿದ್ದಾರೆ. ಮಹಾರಾಷ್ಟ್ರದಲ್ಲಿ ಕಳ್ಳತನ ಮಾಡುವಾಗ ಲಾತೂರ ಜಿಲ್ಲೆಯ ನಿಲಂಗಾದ ಅನ್ಸರವಾಡದಲ್ಲಿ ಮಹಿಳೆಯನ್ನು ವಿವಾಹವಾಗಿದ್ದನು. ಎಲ್ಲರಿಗೂ ಮಕ್ಕಳಿದ್ದಾರೆ.

ಆರೋಪಿಯು ಬೀಗ ಹಾಕಿದ ಮನೆಗಳು, ದೊಡ್ಡ ಬಂಗಲೆಗಳನ್ನು ಗುರಿಯಾಗಿಸಿಕೊಂಡು ಎಲ್ಲಿಯೂ ಬೆರಳಚ್ಚು ದಾಖಲಾಗದಂತೆ ಎಚ್ಚರ ವಹಿಸಿ ಕಳ್ಳತನ ಮಾಡುತ್ತಿದ್ದ. ಸಿಸಿ ಟಿವಿ ಕ್ಯಾಮೆರಾಗಳು ಕಂಡಲ್ಲಿ ಅಂತಹ ಮನೆಗಳನ್ನು ದೋಚುತ್ತಿರಲಿಲ್ಲ.

ಆರೋಪಿ ವಿರುದ್ಧ ಕಲಬರಗಿಯಲ್ಲಿ 10, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿ ಒಟ್ಟಾರೆ 260 ಪ್ರಕರಣಗಳಿವೆ. ಈ ಪೈಕಿ 209 ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆಯಾಗಿದೆ. ಕಳ್ಳತನ ಪ್ರಕರಣವೊಂದರಲ್ಲಿ ಹೈದ್ರಾಬಾದ್‌ನಲ್ಲಿ 4 ವರ್ಷ ಸೆರೆವಾಸ ಅನುಭವಿಸಿ ಹೊರಬಂದ 10 ದಿನದಲ್ಲೇ 6 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.