ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
೭೮ನೇ ಸ್ವಾತಂತ್ರ್ಯೋತ್ಸವದ ಅದ್ಧೂರಿ ಆಚರಣೆಗೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನ ಸಜ್ಜುಗೊಂಡಿದೆ.ತಾಲೂಕು ಆಡಳಿತ, ಪಪಂ ಹಾಗೂ ತಾಪಂ ವತಿಯಿಂದ ಸಾರ್ವಜನಿಕ ಸಮಾರಂಭ ಹಮ್ಮಿಕೊಂಡಿದ್ದು, ತಹಸೀಲ್ದಾರ ವಿಶ್ವನಾಥ ಮುರುಡಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಲಾ ಮಕ್ಕಳಿಂದ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ವಿಜೇತರಾದ ಶಾಲಾ ತಂಡಗಳಿಗೆ ತಾಲೂಕು ಆಡಳಿತ ಬಹುಮಾನ ನೀಡಿ ಗೌರವಿಸಲಿದೆ.
ಇನ್ನೂ ಪೊಲೀಸ್ ಇಲಾಖೆಯಿಂದ ಧ್ವಜ ರಕ್ಷೆ ಹಾಗೂ ವಂದನೆ ಸ್ವೀಕಾರ ನಡೆಯಲಿದೆ. ಸ್ವಾತಂತ್ರ್ಯೋತ್ಸವ ಅರ್ಥಪೂರ್ಣ ಆಚರಣೆಗೆ ವಿವಿಧ ಇಲಾಖೆಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿದ್ಧತಾ ಕಾರ್ಯ ಪೂರ್ಣಗೊಳಿಸಿದ್ದಾರೆ. ಎಲ್ಲ ಕಚೇರಿಗಳು ಧ್ವಜಾರೋಹಣಕ್ಕೆ ಸಜ್ಜುಗೊಂಡಿದ್ದು, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಇತ್ತ ಬಿಜೆಪಿ, ಕಾಂಗ್ರೆಸ್ ಕಚೇರಿಗಳಲ್ಲಿಯೂ ಸ್ವಾತಂತ್ರ್ಯ ದಿನದ ಸಂಭ್ರಮಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಟಿ. ರಾಜಶೇಖರ, ಆರಕ್ಷಕ ನೀರಿಕ್ಷಕ ಎಂ.ಡಿ. ಫೈಜುಲ್ಲಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾ ಪ್ರವಾಸಿ ತಾಣಗಳ ಆಯ್ಕೆಗೆ ವೋಟ್ ಮಾಡಿ:ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್-2024 ಕಾರ್ಯಕ್ರಮದಡಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳ ಆಯ್ಕೆಗಾಗಿ ವೋಟ್ ಮಾಡುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ನೈಸರ್ಗಿಕ, ವನ್ಯಜೀವಿ, ಜಲಪಾತಗಳು, ಸಾಹಸ ಪರಿಸರ ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜನ ನೀಡಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ ವಿಶ್ವ ದರ್ಜೆಗೇರಿಸಲು ಅಭಿವೃದ್ಧಿ ಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್-2024 ಎಂಬ ಶಿರೋನಾಮೆಯಲ್ಲಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.ಜಿಲ್ಲೆಯ ಪ್ರವಾಸಿ ತಾಣಗಳನ್ನು ಆಯ್ಕೆಗೊಳಿಸಲು ಜಿಲ್ಲೆಯ ಯುವಕರು, ಹಿರಿಯ ನಾಗರೀಕರು ಹಾಗೂ ಪ್ರವಾಸಿಗರು ಎಲ್ಲ ಶಾಲಾ ಕಾಲೇಜು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಿಲ್ಲೆಯ ಪ್ರವಾಸಿ ತಾಣಗಳಾದ ಆನೆಗುಂದಿ ಕೋಟೆ, ಅಂಜನಾದ್ರಿ ಬೆಟ್ಟ, ಗವಿಮಠ, ಹುಲಿಗೆಮ್ಮ ದೇವಿ ದೇವಸ್ಥಾನ, ಹುಲಿಕೆರೆ, ಕಬ್ಬರಗಿ ಫಾಲ್ಸ್, ಕನಕಾಚಲಪತಿ ದೇವಸ್ಥಾನ, ಕಿನ್ನಾಳ ಕಲೆ, ಕುಕನೂರು ಮಹಾಮಾಯ ದೇವಸ್ಥಾನ, ನವಬೃಂದಾವನ ಮತ್ತು ಪಂಪಾಸರೋವರ ಈ ತಾಣಗಳಿಗೆ https://innovateindia.mygov.in/dekho-apna-desh/ ಲಿಂಕ್ನಲ್ಲಿ 2024ರ ಸೆ. 15ರೊಳಗಾಗಿ ವೋಟ್ ಮಾಡಬೇಕು.