ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಹೊಸ ಕೋರ್ಸ್, ಪಠ್ಯಕ್ರಮಕ್ಕೆ ಹೊಂದಿಕೊಳ್ಳಲು ಪ್ರಾಧ್ಯಾಪಕರು ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಹೊಸ ವಿಚಾರಗಳು ಮತ್ತು ಜ್ಞಾನ ವೃದ್ಧಿಯಾಗಿ ಕಲಿಸುವಿಕೆಗೆ ಅನುಕೂಲವಾಗುತ್ತದೆ ಎಂದು ಧಾರವಾಡದ ಐಐಟಿ ನಿರ್ದೇಶಕ ಡಾ. ಮಹೇಂದ್ರ ಪ್ರಸನ್ನ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ನ ಪಿಜಿ ಸೆಮಿನಾರ್ ಹಾಲ್ನಲ್ಲಿ ಎಲೆಕ್ಟ್ರಿಕಲ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ “ನಿಸ್ತಂತು ಸಂವಹನ ಮತ್ತು ಸರ್ವಕ್ಕೂ ಅಂರ್ತಜಾಲ” ವಿಷಯ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಂತ್ರಿಕ ವಿದ್ಯಾರ್ಥಿಗಳಿಗೆ ವರ್ಷದಿಂದ ವರ್ಷಕ್ಕೆ ಪಠ್ಯಕ್ರಮದಲ್ಲಿ ಶೇ.30, ಹೊಸದಾಗಿ ಕೂಡಿಸಿ, ತಂತ್ರಜ್ಞಾನ ಆಧಾರಿತ ವಿಷಯಗಳನ್ನು ಕೊಡಲಾಗುತ್ತಿದೆ. ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ, ಸೈಬರ್ ಕ್ರೈಂನಂತಹ ವಿಷಯಗಳಿಗೆ ತಂತ್ರಜ್ಞಾನ ಎನ್ನುವಂತಹದ್ದು ಬಹಳ ಅತ್ಯವಶ್ಯಕವಾಗಿದೆ. ಜೊತೆಗೆ ಈ ಎಲ್ಲ ವಿಷಯಗಳಿಗೆ ಜಾಗತಿಕವಾಗಿ ಮನುಷ್ಯನ ಶಕ್ತಿ ಸಾಮರ್ಥ್ಯವು ಬೇಕು. ಮತ್ತು ಹೊಸ ಹೊಸ ವಿಷಯಗಳನ್ನು ಕಲಿಯುವಂತಹದ್ದು ಒಂದು ಕಲೆಯಾಗಿದ್ದು, ಹಾಗಾಗಿ ಇಂಟರ್ನೆಟ್ ಆಧಾರಿತ ವಿಷಯಗಳನ್ನು ಎಲ್ಲರೂ ಕಲಿತುಕೊಳ್ಳಬೇಕು ಎಂದು ಹೇಳಿದರು.ಬೆಂಗಳೂರಿನ ಲುಕ್ಸ ಆಫ್ ಇಂಡಿಯಾದ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕ ಬ್ರಹ್ಮ ಚೈತನ್ಯ ಚಿನಿವಾರ ಮಾತನಾಡಿ, ''''ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಹೊಸ ಯೋಜನೆಗಳನ್ನು ಮಾಡಲು ಹಾಗೂ ತಮ್ಮ ವೃತ್ತಿ ಕ್ಷೇತ್ರಕ್ಕೆ ಕಾಲಿಟ್ಟಾಗ ಇಂಟರ್ನೆಟ್ ಮತ್ತು ತಂತ್ರಜ್ಞಾನ ಎನ್ನುವಂತಹದ್ದು ಬಹಳ ಪ್ರಯೋಜನಕಾರಿಯಾಗುತ್ತದೆ. ನಾವು ಯಾವುದೇ ವಿಷಯವನ್ನೇ ಆಗಲಿ ಹೊಸದಾಗಿ ಕಲಿತಾಗ ಎಂದಿಗೂ ಅದು ವ್ಯರ್ಥವಾಗುವುದಿಲ್ಲ, ಎಲ್ಲಿಯಾದರೂ ಉಪಯೋಗಕ್ಕೆ ಬಂದೇ ಬರುತ್ತದೆ. ಜೊತೆಗೆ ಇಂದಿನ ಈ ಸಮ್ಮೇಳನವು ಮುಂದಿನ ಭವಿಷ್ಯದಲ್ಲಿ ಸಾಫ್ಟ್ವೇರ್ ಕಂಪನಿಗಳಲ್ಲಿ ಉದ್ಯೋಗಕ್ಕೆ ಹೋಗುವಂತಹ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಹಾಗಾಗಿ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು'''' ಕಿವಿ ಮಾತು ಹೇಳಿದರು.ಸಾಹೆ ವಿವಿ ರಿಜಿಸ್ಟರ್ ಡಾ. ಎಂ. ಜೆಡ್ ಕುರಿಯನ್ ಮಾತನಾಡಿ, ಇಂದು ಕಂಪ್ಯೂಟರ್ ಸೈನ್ಸ್, ಸೈಬರ್ ಕ್ರೈಂನಂತಹ ತಂತ್ರಜ್ಞಾನ ಆಧಾರಿತ ವಿಷಯಗಳಿಗೆ ಬೋಧನೆ ಮಾಡಲು ಆ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಶಿಕ್ಷಕರು ಸಿಗುತ್ತಿರುವುದು ಬಹಳ ವಿರಳವಾಗಿದೆ. ಇಂದಿನ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಒಬ್ಬ ಶಿಕ್ಷಕ ಎಲ್ಲ ವಿಷಯಗಳಲ್ಲೂ ಪರಿಣಿತಿ ಹೊಂದಿ, ಬೋಧನೆ ಮಾಡಬೇಕು. ಬೋಧನೆ ಮಾಡಲು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳು ಬಹಳ ಅನುಕೂಲವಾಗುತ್ತವೆ ಎಂದರು.ಸ್ಪೇನ್ನ ಯುನಿವರ್ಸಿಟಿ ಆಫ್ ಜೇನ್ನ ಪ್ರೊಫೆಸರ್ ಡಾ.ರೇಸಿಯೋ ಪೆರೆಜ್ ಡಿ ಪ್ರಾಡೊ, ಇಟಲಿಯ ಯೂನಿವರ್ಸಿಟಿ ಆಫ್ ರೋಮ್ ಟೊರ್ ವರ್ಗ್ಯಾಟಾದ ಡಾ.ಲೂಸಾ ಡಿ ನುಂಜಿಯೋ , ಮಲೇಶಿಯಾದ ಯುಪಿಎಸ್ ಐ ಯೂನಿವರ್ಸಿಟಿ ಕೌಲಾ ಲಂಪುರ್ ನ ಉಪನಿರ್ದೇಶಕಿ ಡಾ. ಸೀಕಹವೆಲಿಂಗ್ ಪರ್ಲೈನ್ ಅವರು ವೀಡಿಯೋ ಕಾನ್ಪರೆನ್ಸ್ ಮೂಳಕ ಸಂದೇಶ ನೀಡಿದರು.ಎಸ್ ಎಸ್ ಐ ಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಅವರು ಮಾತನಾಡಿ, ''''ಪ್ರಸ್ತುತ ದಿನಮಾನಗಳಲ್ಲಿ ಇಂಟರ್ನೆಟ್ ಎಲ್ಲಾ ಕ್ಷೇತ್ರಗಳಲ್ಲೂ ಬಹಳಷ್ಟು ಪ್ರಯೋಜನಕಾರಿ ಹಾಗೂ ಹೆಚ್ಚು ಉಪಯೋಗವಾಗುತ್ತಿದೆ. ಹಿಂದಿನ ಕಾಲಮಾನದಲ್ಲಿನ ಶಿಕ್ಷಣ ವ್ಯವಸ್ಥೆಗೂ ಪ್ರಸ್ತುತ ದಿನಗಳಲ್ಲಿನ ಶಿಕ್ಷಣ ವ್ಯವಸ್ಥೆಗೂ ಬಹಳಷ್ಟು ವ್ಯತ್ಯಾಸಗಳಿವೆ ಎಂದರು.ವಿಚಾರ ಸಂಕಿರಣದ ಸಂಯೋಜಕರು ಹಾಗೂ ಎಲೆಕ್ಟಿçಕಲ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎನ್. ಈಶ್ವರಪ್ಪ ಅವರು ಸಮ್ಮೇಳನದಲ್ಲಿ ಮಾತನಾಡಿ, ಸಮ್ಮೇಳನಕ್ಕೆ ಹಾಂಕಾಂಗ್, ಚೀನಾ, ಅಮೇರಿಕಾ ಸೇರಿದಂತೆ ವಿವಿಧ ಕಡೆಯಿಂದ 260 ಮಂದಿ ಪ್ರಬಂಧಗಳನ್ನು ಕಳುಹಿಸಿದ್ದರು. ಅವುಗಳನ್ನು 62 ನ್ನು ಮಾತ್ರ ಸಮ್ಮೇಳನದಲ್ಲಿ ಮಂಡಿಸಲು ಆಯ್ಕೆ ಮಾಡಲಾಗಿದೆ ಎಂದರು.
ಡೀನ್ ಡಾ. ರೇಣುಕಾಲತಾ, ಹಿರಿಯ ಪ್ರಾಧ್ಯಾಪಕರಾದ ಡಾ.ಎಂ.ಸುರೇಶ್, ಡಾ.ಚಿದಾನಂದ ಮೂರ್ತಿ, ಡಾ.ಅಜಯ್ ಕುಮಾರ್ ಸೇರಿದಂತೆ ವಿವಿಧ ದೇಶದ ವಿವಿಧ ಕಾಲೇಜಿನಿಂದ ಬಂದ ಸಂಶೋಧನಾರ್ಥಿಗಳು, ಪ್ರಬಂಧ ಮಂಡಿಸುವ ವಿಷಯ ತಜ್ಙರು ಬೇರೆ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.