ಸಾರಾಂಶ
ನಂದಗುಡಿ ಹೋಬಳಿಯ ಗೆದ್ದಲಹಳ್ಳಿಪುರ ಗ್ರಾಮದಲ್ಲಿ ಡ್ರೋನ್ ಸರ್ವೆಗೆ ಹೋದ ಅಧಿಕಾರಿಗಳಿಗೂ ಹಾಗೂ ಟೌನ್ಶಿಪ್ ಯೋಜನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಸ್ಪಷ್ಟಪಡಿಸಿದರು.
ಹೊಸಕೋಟೆ: ನಂದಗುಡಿ ಹೋಬಳಿಯ ಗೆದ್ದಲಹಳ್ಳಿಪುರ ಗ್ರಾಮದಲ್ಲಿ ಡ್ರೋನ್ ಸರ್ವೆಗೆ ಹೋದ ಅಧಿಕಾರಿಗಳಿಗೂ ಹಾಗೂ ಟೌನ್ಶಿಪ್ ಯೋಜನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಆಸ್ತಿಗಳ ಡ್ರೋನ್ ಸರ್ವೆ ಮೂಲಕ ಆಸ್ತಿಗಳ ಗಡಿ ಗುರುತಿಸುವ ಕಾರ್ಯ ನಡೆಯುತ್ತಿದೆ. ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಗೆದ್ದಲಹಳ್ಳಿಪುರಕ್ಕೆ ಏರಿಯಲ್ ಸರ್ವೆಗೆ ಅಧಿಕಾರಿಗಳು ಡ್ರೋನ್ ತೆಗೆದುಕೊಂಡು ಹೋದಾಗ ಅಲ್ಲಿನ ರೈತರು ಟೌನ್ಶಿಪ್ಗೆ ಭೂಸ್ವಾಧೀನಕ್ಕೆ ಸರ್ವೆ ಮಾಡಲು ಬಂದಿದ್ದಾರೆ ಎಂದು ತಪ್ಪು ತಿಳಿದುಕೊಂಡು ಸ್ಥಳದಲ್ಲಿ ಗೊಂದಲ ಸೃಷ್ಟಿಸಿಕೊಂಡಿದ್ದಾರೆ. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸೂಕ್ತ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ರೈತರು ಆತಂಕ ಪಡುವ ಅಗತ್ಯವಿಲ್ಲ. ಇದು ತಾಲೂಕಾದ್ಯಂತ ಆಗುವ ಕೆಲಸ ಎಂದು ಸ್ಪಷ್ಟನೆ ನೀಡಿದ ಮೇಲೆ ರೈತರು ಸುಮ್ಮನಾಗಿದ್ದಾರೆ. ಆದ್ದರಿಂದ ಟೌನ್ಶಿಪ್ಗೂ ಡ್ರೋನ್ ಸರ್ವೆಗೂ ಸಂಬಂಧವಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಸ್ಪಷ್ಟಪಡಿಸಿದರು.