ಸಾರಾಂಶ
ಮುದ್ದೇಬಿಹಾಳ : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ಶಿಕ್ಷಣ, ಆರೋಗ್ಯ ಸುಧಾರಣೆಗೆ ವಿಶೇಷ ಯೋಜನೆಗಳನ್ನು ರೂಪಿಸುವ ಮೂಲಕ ಉತ್ತಮ ಜನಪರ ಆಡಳಿತ ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.
ಪಟ್ಟಣದ ಹಡಲಗೇರಿ ರಸ್ತೆ ಮಾರ್ಗದಲ್ಲಿರುವ ತಾಲೂಕು ಆಸ್ಪತ್ರೆ ನವೀಕರಣ ಹಾಗೂ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನಹೊಂದಿದ ಸಾರ್ವಜನಿಕ ಪ್ರಯೋಗಾಲಯ ಘಟಕವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿ ರಸ್ತೆ, ಚರಂಡಿ, ನಿರಾವರಿ ಯೋಜನೆ, ಶಾಲಾ ಕಟ್ಟಡಗಳ ದುರಸ್ತಿ ಹೀಗೆ ಹಲವು ರೀತಿಯಲ್ಲಿ ಅಭಿವೃದ್ಧಿ ಪೂರಕ ಕಾಮಗಾರಿಗಳು ಪ್ರಗತಿಯಲ್ಲಿ ಸಾಗಿವೆ. ಜನಸಾಮಾನ್ಯರ ಹಿತ ಕಾಪಾಡುವುದು ನಮ್ಮ ಸರ್ಕಾರದ ಪ್ರಥಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜನರ ಬೇಡಿಕೆಯಂತೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಹೊಂದಿದ ಪ್ರಯೋಗಾಲಯ ನಿರ್ಮಿಸಲಾಗಿದೆ. ಅದರಂತೆ ಆಸ್ಪತ್ರೆಯಲ್ಲಿ ಕೆಲ ಕೊಠಡಿಗಳ ದುರಸ್ತಿ ಹಾಗೂ ನವೀಕರಣಗೊಳಿಸಲು ತಿರ್ಮಾನಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಸಾರ್ವಜನಿಕರು ಅಭಿವೃದ್ಧಿ ಪೂರಕ ಕಾಮಗಾರಿಗಳಿಗೆ ಸಹಕಾರ ಅತ್ಯಗತ್ಯವಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮತ್ತು ತುರ್ತು ಚಿಕಿತ್ಸೆಗೆ ಸಂಬಂಧಿಸದಂತೆ ಇನ್ನೂ ವಿವಿಧ ಸೌಲಭ್ಯಗಳನ್ನು ಹೊಂದಿದ ತುರ್ತು ಆರೋಗ್ಯ ಸೇವೆ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನೀಲಕುಮಾರ ಶೇಗುಣಸಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಮುಖಂಡರಾದ ಸಂಗನಗೌಡ ಬಿರಾದಾರ(ಜಿಟಿಸಿ) ಗಣೇಶ ಅನ್ನಗೋನಿ, ಆನಂದಗೌಡ ಬಿರಾದಾರ, ಕೆಯುಸಿ ಬ್ಯಾಂಕಿ ಅಧ್ಯಕ್ಷ ಸಿ ಎಲ್ ಬಿರಾದಾರ,ಶೋಭಾ ಶಳ್ಳಗಿ, ಸೇರಿದಂತೆ ಹಲವರು ಇದ್ದರು.