ಸಾರಾಂಶ
ತ್ಯಾಗರ್ತಿ: ರಕ್ತದಾನಕ್ಕೆ ಒಂದು ಸುವ್ಯವಸ್ಥೆಯನ್ನು ಒದಗಿಸುವ ಉದ್ದೇಶದಿಂದ ಸಂಸ್ಥಾನವು ರಕ್ತಬಂಧ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹವ್ಯಕ ಮಹಾಮಂಡಲದ ಸೇವಾ ಮತ್ತು ಸಹಾಯ ಪ್ರಧಾನರಾದ ಪ್ರಸನ್ನ ಯು.ಎಲ್ ಉಡುಚೆ ಹೇಳಿದರು.
ಸಾಗರ ತಾಲೂಕಿನ ನೀಚಡಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಶ್ರೀ ರಾಮಚಂದ್ರಾಪುರ ಮಂಡಲ ಕಾನುಗೋಡು ವಲಯ, ರೋಟರಿ ರೆಡ್ಕ್ರಾಸ್ ರಕ್ತನಿಧಿ ಕೇಂದ್ರ ಸಾಗರ, ಇವರ ಸಹಭಾಗಿತ್ವದಲ್ಲಿ ನೀಚಡಿ ಟ್ರಸ್ಟ್ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಕ್ತಬಂಧ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಇವರು, ರಕ್ತಬಂಧ ಯೋಜನೆಯು ಕೇವಲ ಒಂದೇ ಸಮುದಾಯಕ್ಕಾಗಿ ಪ್ರಾರಂಭಿಸಿರುವುದಲ್ಲ. ಎಲ್ಲಾ ಸಮುದಾಯವು ಈ ಯೋಜನೆಯಡಿ ಪಾಲ್ಗೊಂಡು ಸಹಾಯ ಪಡೆಯಬಹುದಾಗಿದೆ.ರಾಜ್ಯದ ಹಲವು ವಲಯಗಳಲ್ಲಿ ಸಂಸ್ಥಾನದ ವತಿಯಿಂದ ರಕ್ತಬಂಧ ಯೋಜನೆಯಡಿ ರಕ್ತದಾನ ಶಿಬಿರಗಳನ್ನು ನೆಡೆಸುತ್ತಿದ್ದು, ಅನಿವಾರ್ಯ ಸಂಧರ್ಭಗಳಲ್ಲಿ ರಕ್ತದ ಅವಶ್ಯಕತೆ ಬಂದಾಗ ಈ ರಕ್ತಬಂಧ ಯೋಜನೆಯು ತಕ್ಷಣವೇ ಸಹಕಾರ ನೀಡುತ್ತದೆ. ಸಂಸ್ಥಾನದ ಈ ಸಂಕಲ್ಪವನ್ನು ಈಡೇರಿಸಲು ಪ್ರತಿಯೊಬ್ಬರನ್ನೂ ರಕ್ತದಾನಕ್ಕೆ ಪ್ರೇರೇಪಿಸಬೇಕೆಂದು ಕರೆ ನೀಡಿದರು.
ಸಾಗರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಮೇಜರ್ ನಾಗರಾಜ್.ಎಂ ಮಾತನಾಡಿ, ರಕ್ತದಾನದ ಮಹತ್ವವನ್ನು ವಿವರಿಸಿದರು. ಈ ಶಿಬಿರದಲ್ಲಿ 53ಯುನಿಟ್ ರಕ್ತ ಸಂಗ್ರಹಿಸಲಾಯಿತು.ರಾಮಚಂದ್ರಾಪುರ ಮಂಡಲ ಕಾನುಗೋಡು ವಲಯದ ಅಧ್ಯಕ್ಷ ಎನ್.ಜಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ನೀಚಡಿ ಟ್ರಸ್ಟ್ನ ಅಧ್ಯಕ್ಷ ಎಸ್.ಎಂ.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ನೀಚಡಿ ಹಾಲು ಉತ್ಪಾದಕ ಸಹಕಾರ ಸಂಘದ ಉಪಾಧ್ಯಕ್ಷರಾದ ಶ್ಯಾಮಲಾ ನಾರಾಯಣಮೂರ್ತಿ, ಬಿ.ಎನ್.ಕಿರಣ್, ಎನ್.ಎ. ದತ್ತಮೂರ್ತಿ, ಬಿ.ಜಿ.ಅನಂತಮೂರ್ತಿ, ಎನ್.ಟಿ.ಯೋಗೀಶ್ ಉಪಸ್ಥಿತರಿದ್ದರು.