ಸೂಕ್ತ ತರಬೇತಿ ಪಡೆದಾಗ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಮೂಲತಃ ಕೊಡಗಿನವರಾದ ನ್ಯೂಝಿಲ್ಯಾಂಡ್‌ ಗ್ಯಾರೆಂಟೆಡ್‌ ಫ್ಲೋ ಸಿಸ್ಟಮ್ಸ್‌ ಜನರಲ್‌ ಮ್ಯಾನೇಜರ್‌ ಕಾರ್ಯಪ್ಪ ಕರಂಬಯ್ಯ ಹೇಳಿದ್ದಾರೆ. ವಿರಾಜಪೇಟೆ ಸೇಂಟ್‌ ಆನ್ಸ್ ಪದವಿ ಕಾಲೇಜಿನ ವೃತ್ತಿಯಾಧಾರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಸೂಕ್ತ ತರಬೇತಿ ಪಡೆದಾಗ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಮೂಲತಃ ಕೊಡಗಿನವರಾದ ನ್ಯೂಝಿಲ್ಯಾಂಡ್‌ ಗ್ಯಾರೆಂಟೆಡ್‌ ಫ್ಲೋ ಸಿಸ್ಟಮ್ಸ್‌ ಜನರಲ್‌ ಮ್ಯಾನೇಜರ್‌ ಕಾರ್ಯಪ್ಪ ಕರಂಬಯ್ಯ ಹೇಳಿದ್ದಾರೆ.

ವಿರಾಜಪೇಟೆ ಸೇಂಟ್‌ ಆನ್ಸ್ ಪದವಿ ಕಾಲೇಜಿನ ಅಂತಿಮ ಬಿಸಿಎ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವೃತ್ತಿಯಾಧಾರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಉತ್ತಮ ಶೈಕ್ಷಣಿಕ ತರಬೇತಿಗೆ ಅಂತಾರಾಷ್ಟ್ರೀಯ ಮಟ್ಟದ ವರೆಗೂ ಅವಕಾಶವಿದೆ ಎಂದ ಅವರು, ದೇಶದ ಹೊರಗಡೆ ವೃತ್ತಿಗೆ ತೆರಳುವಾಗ ನಕಲಿ ಏಜನ್ಸಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದರು.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಮಷೀನ್ ಲರ್ನಿಂಗ್‌ನ ವಿನೂತನ ಮಾದರಿಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಪ್ರಸ್ತುತ ಉದ್ಯೋಗ ಪಡೆಯಲು ವೃತ್ತಿ ತರಬೇತಿ ಅವಶ್ಯಕವಾಗಿದ್ದು ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕುರಿತು ತಾವೇ ನಿರ್ಧರಿಸಿ ಜಾಗೃತರಾಗಬೇಕು ಎಂದು ಕರೆ ಕೊಟ್ಟರು.

ಬಿಸಿಎ ವಿಭಾಗ ಮುಖ್ಯಸ್ಥ ಸೌಮ್ಯ ಸೋಮರಾಜ್ ಹಾಗೂ ಉಪನ್ಯಾಸಕರು, ಅಂತಿಮ ಬಿಸಿಎ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥನಿ ಸ್ನೋಹ ನಿರೂಪಿಸಿದರು.