ಸಾರಾಂಶ
Stay Educated Without Falling Victim to the Evil Practice of Child Marriage
-ಬಾಲ್ಯ ವಿವಾಹ ನಿಷೇಧ ಕುರಿತ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್
-------ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು
ಬಾಲ್ಯ ವಿವಾಹದಂತ ಅನಿಷ್ಟ ಪದ್ಧತಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳದೆ ಶಿಕ್ಷಣವಂತರಾಗಿ ಸಮಾಜದಲ್ಲಿ ಸ್ವಾವಲಂಬಿ ಬದುಕನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಹೇಳಿದರು.ಯರೇನಹಳ್ಳಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸಲಾಗಿದ್ದ ಬಾಲ್ಯ ವಿವಾಹ ನಿಷೇಧ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡತನ ಇನ್ನಿತರ ಕಾರಣಗಳಿಂದ ಪೋಷಕರು ವಯಸ್ಸಿಗೆ ಬರುವ ಮುನ್ನವೇ ಮಕ್ಕಳಿಗೆ ವಿವಾಹ ಮಾಡುವಂತಹ ಘಟನೆಗಳು ಕಾಣಸಿಗುತ್ತಿವೆ. ಮಕ್ಕಳು ಜಾಗೃತರಾಗಬೇಕು ಬಾಲ್ಯ ವಿವಾಹದಂತ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಬೇಕು. ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಪೋಷಕರಿಗೆ ಮನವರಿಕೆ ಮಾಡಬೇಕು. ಈ ಸಂಬಂಧವಾಗಿ ಅವರನ್ನು ಜಾಗೃತ ರನ್ನಾಗಿಸಬೇಕು. ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಮನದಟ್ಟು ಮಾಡಬೇಕು. ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಅವುಗಳನ್ನು ಸದ್ಭಳಕೆ ಮಾಡಿಕೊಂಡು ಶಿಕ್ಷಣವಂತರಾಗಿ ಬಾಳಬೇಕು ಎಂದರು.ಪ್ರಾಂಶುಪಾಲ ಶಿವರಾಜ್ ಮಾತನಾಡಿ, ಕಲಿಯುವ ಹಂತದಲ್ಲಿ ಬಾಲ್ಯ ವಿವಾಹದಂತ ಕೂಪಕ್ಕೆ ಬೀಳದೆ ಹೆಚ್ಚಿನ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. 18 ವರ್ಷ ತುಂಬುವ ಮುಂಚೆ ವಿವಾಹವಾಗದೆ ವಿದ್ಯಾಭ್ಯಾಸದ ಕಡೆ ಮುಖ ಮಾಡಬೇಕು. ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ದೊಡ್ಡ ವಿದ್ಯಾವಂತರಾಗಿ ಸ್ವಾಭಿಮಾನಿಗಳಾಗಿ ಬಾಳಬೇಕೆಂದು ತಿಳಿಸಿದರು.
ಶಶಿ ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಲೀಲಾಬಾಯಿ, ಶಿಕ್ಷಕರಾದ ದಸ್ತಗೀರ್ ,ಅರುಣ್ ಕುಮಾರ್, ವಿನುತಾ, ಅನ್ನಪೂರ್ಣ, ನಿಲಯ ಪಾಲಕಿ ವನಜ, ಶುಶೃಶಕಿ ಸಹನ ಇದ್ದರು.------