ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಿರಲಿ: ರನ್ನ ಗೌಡ

| Published : Jul 08 2024, 12:35 AM IST

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಿರಲಿ: ರನ್ನ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಾದಕ ವ್ಯಸನ ಒಂದು ಸಾಮಾಜಿಕ ಪಿಡುಗಾಗಿದೆ. ಪ್ರತಿವರ್ಷ 5.70 ಲಕ್ಷ ಜನರು ಮಾದಕ ವ್ಯಸನದಿಂದ ಸಾವಿಗೀಡಾಗುತ್ತಿದ್ದಾರೆ. ದೇಶದಲ್ಲಿ 7.5 ಕೋಟಿ ಮಾದಕ ವ್ಯಸನಿಗಳಿದ್ದಾರೆ.

ಭಟ್ಕಳ: ಪಾಶ್ಚಿಮಾತ್ಯ ಜೀವನ ಶೈಲಿಗೆ ಮಾರುಹೋಗಿ ದುಶ್ಚಟಗಳಿಗೆ ಬಲಿಯಾಗಿ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ರನ್ನ ಗೌಡ ತಿಳಿಸಿದರು.

ಬೆಳಕೆ ಸರ್ಕಾರಿ ಪ್ರೌಢಶಾಲೆ ಎನ್ನೆಸ್ಸೆಸ್ ಘಟಕ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧಿ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾದಕ ವ್ಯಸನ ಒಂದು ಸಾಮಾಜಿಕ ಪಿಡುಗಾಗಿದೆ. ಪ್ರತಿವರ್ಷ 5.70 ಲಕ್ಷ ಜನರು ಮಾದಕ ವ್ಯಸನದಿಂದ ಸಾವಿಗೀಡಾಗುತ್ತಿದ್ದಾರೆ. ದೇಶದಲ್ಲಿ 7.5 ಕೋಟಿ ಮಾದಕ ವ್ಯಸನಿಗಳಿದ್ದಾರೆ. ಪ್ರತಿದಿನ 10 ಜನರು ಮಾದಕ ವ್ಯಸನದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುರಂತವೆಂದರೆ ಪ್ರತಿ 10 ಜನರಲ್ಲಿ ಇಬ್ಬರು 16 ವರ್ಷಕ್ಕಿಂತ ಕಡಿಮೆ ವಯೋಮಾನದವರಿದ್ದಾರೆ ಎಂದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳ್ಳಲು ಆಲೋಚನೆಗಳು ಯಾವಾಗಲೂ ಸಕಾರಾತ್ಮಕವಾಗಿರಬೇಕು. ಒಳ್ಳೆಯ ಶಿಕ್ಷಣ ಪಡೆದು ದೇಶಕ್ಕೆ ಕೊಡುಗೆಯನ್ನು ನೀಡಬೇಕು ಎಂದರು.

ಎನ್ನೆಸ್ಸೆಎಸ್ ಕಾರ್ಯಕ್ರಮಾಧಿಕಾರಿ ಪ್ರಕಾಶ ಶಿರಾಲಿ ಪ್ರಾಸ್ತಾವಿಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಾನಗರಗಳಿಂದ ಗ್ರಾಮೀಣ ಭಾಗಗಳಿಗೂ ಇಂತಹ ಪಿಡುಗು ವ್ಯಾಪಿಸಿರುವುದು ದುರದೃಷ್ಟಕರ. ವಿದ್ಯಾರ್ಥಿಗಳು ಈ ಬಗ್ಗೆ ಜಾಗ್ರತೆ ವಹಿಸುವುದರೊಂದಿಗೆ ಇಂತಹ ದುಶ್ಚಟಗಳು ತಮ್ಮ ವ್ಯಾಪ್ತಿಯಲ್ಲಿ ಕಂಡುಬಂದರೆ ಪೊಲೀಸ್‌ ಸಹಾಯವಾಣಿಗೆ ಮಾಹಿತಿ ನೀಡಿ ಎಂದರು.

ಹೇಮಾವತಿ ಎಸ್ ವಂದಿಸಿದರು. ಪ್ರಶಾಂತಿ ನಾಯ್ಕ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಕ್ಷತ್ ಕುಮಾರ, ವಿನೋದ ಕುಮಾರ, ಶಿಕ್ಷಕರಾದ ಸವಿತಾ ನಾಯ್ಕ ಪ್ರಶಿಕ್ಷಣಾರ್ಥಿ ಮೇಘನಾ ನಾಯ್ಕ ಮುಂತಾದವರಿದ್ದರು.