ಕಾಡಾನೆಗಳಿಂದ ಮಾನವನ ಸಾವಾಗದಂತೆ ಕ್ರಮ ಕೈಗೊಳ್ಳಿ

| Published : Mar 16 2025, 01:45 AM IST

ಕಾಡಾನೆಗಳಿಂದ ಮಾನವನ ಸಾವಾಗದಂತೆ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಇಲಾಖೆ ಕಾಡಾನೆ ದಾಳಿಯಿಂದ ಮಾನವನ ಸಾವುಗಳು ಆಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಸರ್ಕಾರ ಹಲವು ತಂತ್ರಜ್ಞಾನಗಳನ್ನು ಕಾಡಾನೆ ನಿಯಂತ್ರಣಕ್ಕೆ ಬಳಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ನಿಯಂತ್ರಣಕ್ಕೆ ಇರುವ ಸಿಬ್ಬಂದಿ ಸಹ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದು, ಇವರಿಗೂ ಸಹ ಯಾವುದೇ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಸರ್ಕಾರ ಸರಿಯಾದ ಸಲಕರಣೆಗಳನ್ನು ನೀಡಬೇಕು ಹಾಗೂ ಸೂಕ್ತ ಸಂಬಳ ನೀಡಬೇಕು. ಈ ನಿಟ್ಟಿನಲ್ಲಿ ನಾನು ಅಧಿವೇಶನದಲ್ಲಿ ಪ್ರಸ್ತಾವನೆ ಮಾಡುತ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಅರಣ್ಯ ಇಲಾಖೆ ಕಾಡಾನೆ ದಾಳಿಯಿಂದ ಮಾನವನ ಸಾವುಗಳು ಆಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಇಲಾಖೆಯ ಆರ್.ಆರ್.ಟಿ ಹಾಗೂ ಎಡಿಸಿ ಸಿಬ್ಬಂದಿಗೆ ಬೇಕಾಗಿರುವ ಸೋಲಾರ್ ಲೈಟ್, ಶೂ, ಸಮವಸ್ತ್ರ, ಬೆಂಕಿ ನಂದಿಸುವ ಕೋಲು ಮತ್ತಿತರ ವಸ್ತುಗಳನ್ನು ವಿತರಿಸಿದ ನಂತರ ಮಾತನಾಡಿದರು. ಹಾಸನ ಜಿಲ್ಲೆಯಲ್ಲೇ ಅತಿ ಹೆಚ್ಚು ಅರಣ್ಯ ಪ್ರದೇಶ ಸಕಲೇಶಪುರ, ಬೇಲೂರು, ಆಲೂರು ತಾಲೂಕುಗಳ ವ್ಯಾಪ್ತಿಯಲ್ಲಿದ್ದು ಇಲ್ಲಿ ಕಾಡಾನೆಗಳ ಹಾವಳಿಯಿಂದ ಹಲವು ಸಾವು, ನೋವುಗಳು ಸಂಭವಿಸಿದೆ. ಸರ್ಕಾರ ಹಲವು ತಂತ್ರಜ್ಞಾನಗಳನ್ನು ಕಾಡಾನೆ ನಿಯಂತ್ರಣಕ್ಕೆ ಬಳಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ನಿಯಂತ್ರಣಕ್ಕೆ ಇರುವ ಸಿಬ್ಬಂದಿ ಸಹ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದು, ಇವರಿಗೂ ಸಹ ಯಾವುದೇ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಸರ್ಕಾರ ಸರಿಯಾದ ಸಲಕರಣೆಗಳನ್ನು ನೀಡಬೇಕು ಹಾಗೂ ಸೂಕ್ತ ಸಂಬಳ ನೀಡಬೇಕು. ಈ ನಿಟ್ಟಿನಲ್ಲಿ ನಾನು ಅಧಿವೇಶನದಲ್ಲಿ ಪ್ರಸ್ತಾವನೆ ಮಾಡುತ್ತೇನೆ ಎಂದರು.

ತೊಂದರೆ ಕೊಡುವುದು ಸರಿಯಲ್ಲ:

ಅರಣ್ಯ ಇಲಾಖೆಯವರು ಸಹ ಕಾಡಾನೆಗಳನ್ನು ಹಿಡಿಯುವ ಬದಲು ರೈತರು ಕಡಿದಿರುವ ಸೌದೆಗಳನ್ನು ವಶಪಡಿಸಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ. ಇದರಿಂದ ರೈತರು ತೋಟದಲ್ಲಿ ಮರಗಸಿ ಮಾಡುವುದಕ್ಕೆ ಅಂಜುವಂತಾಗಿದೆ. ಇದೇ ರೀತಿ ಸಾಂಪ್ರದಾಯಿಕವಾಗಿ ವರ್ಷದಲ್ಲಿ ೩ ತಿಂಗಳು ವ್ಯವಹಾರ ಮಾಡುವ ಇಟ್ಟಿಗೆ ಉದ್ಯಮಕ್ಕೂ ತೊಂದರೆ ಉಂಟಾಗುತ್ತಿದೆ. ಇದಲ್ಲದೆ ಕಾಡಂಚಿನ ಜಾಗಗಳಲ್ಲಿ ತಲೆತಲಾಂತರಗಳಿಂದ ವಾಸವಿರುವ ಜನರಿಗೂ ಸಹ ತೊಂದರೆ ಕೊಡುತ್ತಿದ್ದಾರೆ ಹಾಗೂ ಜಮೀನು ಮಂಜೂರಾತಿಗೆ ಅರ್ಜಿ ಹಾಕಿದವರಿಗೂ ರಕ್ಷಿತಾರಣ್ಯ ಹೆಸರಿನಲ್ಲಿ ತೊಂದರೆ ಕೊಡುವುದು ಸರಿಯಲ್ಲ. ಅರಣ್ಯ ಇಲಾಖೆಯವರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿದ್ದೇನೆ. ಅರಣ್ಯ ಇಲಾಖೆಯವರು ಕಾನೂನಿಗಿಂತ ಜೀವ ದೊಡ್ಡದು ಎಂಬುದನ್ನು ಮನಗಾಣಬೇಕು. ಅರಣ್ಯ ಇಲಾಖೆಯವರು ಒತ್ತಾಸೆಯಂತೆ ನಾನು ಸಹ ಸರ್ಕಾರಕ್ಕೆ ಸ್ಪೆಷಲ್ ಎಕನಾಮಿಕ್ ಜೋನ್ ರೀತಿಯಲ್ಲಿ ಸ್ಪೆಷಲ್ ಎಲಿಫೆಂಟ್ ಜೋನನ್ನು ನಾನು ನಮ್ಮ ಭಾಗದಲ್ಲಿ ಮಾಡಲು ಒತ್ತಾಯಿಸುತ್ತೇನೆ ಎಂದರು.

ಸಿಬ್ಬಂದಿಗೆ ಕ್ವಾರ್ಟಸ್ ಬೇಕು:

ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಮಾತನಾಡಿ, ಅರಣ್ಯ ಇಲಾಖೆಯ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದೆ. ಅಲ್ಲದೆ ಸಿಬ್ಬಂದಿಗಾಗಿ ಕ್ವಾರ್ಟಸ್ ಇಲ್ಲ ಮತ್ತು ಇಲ್ಲಿದ್ದ ವಲಯ ಅರಣ್ಯಾಧಿಕಾರಿ ಮನೆಯನ್ನು ಕಾಡಾನೆ ಕಾರ್ಯಪಡೆ ಕಚೇರಿಗೆ ನೀಡಲಾಗಿದ್ದು ಇದೀಗ ಈ ಕಚೇರಿಯನ್ನು ಸಹ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಈ ಕಟ್ಟಡವನ್ನು ಕೆಡವಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕ್ವಾರ್ಟಸ್ ಮಾಡಲು ಮುಂದಾಗಬೇಕು. ಈ ಬಾರಿ ಕಳೆದ ಬಾರಿಗಿಂತ ಬೆಂಕಿ ಪ್ರಕರಣಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಸುಮಾರು ೬೬ ಕಿ.ಮೀ ದೂರ ಫೈರ್‌ಲೈನ್ ಮಾಡಲಾಗಿದೆ. ಮಾರನಹಳ್ಳಿಯಲ್ಲಿ ೨೫ ಕಿ.ಮೀ, ಕಬ್ಬಿನಹಾಲೆಯಲ್ಲಿ ೧೬ , ಮೂರು ಕಣ್ಣು ಗುಡ್ಡದಲ್ಲಿ ೧೫, ಬ್ಯಾಕರವಳ್ಳಿಯಲ್ಲಿ ೧೦ ಕಿ.ಮಿ, ದೂರ ಫೈರ್‌ಲೈನ್ ಮಾಡಲಾಗಿದ್ದು ಇದರಿಂದ ಅರಣ್ಯದಲ್ಲಿ ಕಾಳ್ಗಿಚ್ಚು ಪ್ರಕರಣಗಳು ಕಂಡು ಬಂದಾಗ ತಕ್ಷಣ ಬೆಂಕಿ ನಂದಿಸಲು ಸಹಾಯವಾಗುತ್ತದೆ. ೧೧ ಮಾಸಾಶನ ಪ್ರಕರಣಗಳಿದ್ದು ನಿಯಮಿತವಾಗಿ ಹಣ ನೀಡಲಾಗುತ್ತಿದೆ. ಒಟ್ಟು ೫೨೬ ಬೆಳೆ ಹಾನಿ ಪ್ರಕರಣಗಳಿದ್ದು ೨೦೨೩-೨೪ನೇ ಸಾಲಿನ ೧೮೩ ಪ್ರಕರಣಗಳಿಗೆ ಹಾಗೂ ೨೦೨೪-೨೫ನೇ ಸಾಲಿನ ೧೮೪ ಪ್ರಕರಣಗಳಿಗೆ ಒಟ್ಟು ೩೬೭ ಪ್ರಕರಣಗಳಿಗೆ ೩೯, ೬೨, ೧೩೫ ರೂಗಳನ್ನು ಪಾವತಿಸಲಾಗಿದ್ದು ೨೪೧ ಪ್ರಕರಣಗಳಿಗೆ ೨೭, ೬೮,೪೪೫ ರೂ ಇದೀಗ ಮಂಜೂರಾತಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಡಂಚಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಸಿಲಿಂಡರ್‌ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಯಸಳೂರು ವಲಯ ಅರಣ್ಯಾಧಿಕಾರಿ ಕೃಷ್ಣ, ಕಸಬಾ ಅರಣ್ಯಾಧಿಕಾರಿ ಮಹಾದೇವ್, ಆದಿವಾಸಿ ಮುಖಂಡ ನವೀನ್ ಸದಾ, ಡಿಆರ್‌ಎಫ್‌ಒಗಳಾದ ದರ್ಶನ್, ಮಂಜುನಾಥ್, ಬಿಜೆಪಿ ಮುಖಂಡರುಗಳಾದ ಜಂಬರ್ಡಿ ಲೋಹಿತ್, ರಾಜ್‌ಕುಮಾರ್, ವಿನಯ್, ಪುರಸಭಾ ಸದಸ್ಯ ಪ್ರದೀಪ್, ಲೋಕೇಶ್ ಮತ್ತಿತರರು ಹಾಜರಿದ್ದರು.