ಸಾರಾಂಶ
ಬಾಗಲಕೋಟೆ : ಬುದ್ಧನ ಶಾಂತಿ ಸಂದೇಶಗಳಾದ ಪಂಚಶೀಲ ತತ್ವಗಳಿಂದ ಜಗತ್ತೇ ಶರಣಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈಭವದ ಜೀವನದಲ್ಲಿ ಜನಿಸಿದ್ದ ಸಿದ್ಧಾರ್ಥ ಪ್ರತಿಯೊಬ್ಬ ಮಾನವ ಅನುಭವಿಸುವ ಬಾಲ್ಯ, ಯೌವನ ಸಂಸಾರಿಕ ತಾಪತ್ರೆಯ, ಮುಪ್ಪು ರೋಗ, ರುಜಿನಗಳಿಂದ ಬಳಲಿ ಕೊನೆಗೆ ಸಾವನ್ನು ಕಂಡು ಮನುಷ್ಯನ ಶರೀರ ನಶ್ವರ ಎಂದು ತಿಳಿದು ವೈರಾಗ್ಯದಿಂದ ಬೋಧಿವೃಕ್ಷದ ಕೆಳಗೆ ಧ್ಯಾನಸಕ್ತನಾಗಿ ಬುದ್ಧನಾಗಿ ಹೊರಹೊಮ್ಮಿದ, ಬುದ್ಧನ ಸಂದೇಶಗಳು ಹಿಂದೆ ಮುಂದೆ ಎಂದೆಂದೂ ದಾರಿ ದೀಪಗಳಾಗಿವೆ ಎಂದರು.
ಆಳಂದಳ ಪೂಜ್ಯ ಬಂತಅಮರ್ ಜ್ಯೋತಿ ಮಹಾರಾಜ ಮಾತನಾಡಿ, ಮನುಕುಲದ ಉಪಯೋಗಕ್ಕಾಗಿ ಅನೇಕ ಶಾಂತಿ ತತ್ವಗಳನ್ನು ಭಗವಾನ್ ಬುದ್ಧ ನೀಡಿದ್ದಾನೆ. ಅವನ ದೃಷ್ಟಿಯಲ್ಲಿ ಐದು ತರದ ಜನರಿರುತ್ತಾರೆ. ಸದಾ ಕೆಟ್ಟ ಯೋಚನೆ ಮಾಡುವ, ತೊಂದರೆ ಕೊಡುವ ಮನುಷ್ಯರಿಗೆ ಐವಾನ್ ಎಂದು, ಕೆಟ್ಟದ್ದನ್ನು ಮಾಡಿ ನಾನು ಮಾಡಿಲ್ಲ ಎಂದು ಸುಳ್ಳು ಹೇಳುವವನಿಗೆ ಸೈತಾನನೆಂದು ಸಮಾಜದಲ್ಲಿ ಸದಾ ಗದ್ದಲ ಸಂಘರ್ಷ ಮಾಡಿ ಹುಚ್ಚರಂತೆ ತಿರುಗಾಡುವವನನ್ನು ದಿವಾನನೆಂದು ಕರೆಯಲಾಗುತ್ತದೆ ಎಂದು ಹೇಳಿದರು.
ಏನಾದರೂ ಆಗು ಮೊದಲು ಮಾನವನಾಗು. ಮಾನವೀಯತೆಗೆ ಆದ್ಯತೆ ನೀಡುವವನಿಗೆ ಇನ್ಸಾನ್ ಎಂದು ಕರೆಯಲ್ಪಟ್ಟು ಕೊನೆಗೆ ಜೀವಿತಾವಧಿಯಲ್ಲಿ ಹುಟ್ಟಿನಿಂದ ಸಾಯುವವರೆಗೂ ಒಂದೇ ಒಂದು ತಪ್ಪು ಮಾಡದವನಿಗೆ ಭಗವಾನನೆಂದು ಕರೆಯಲಾಗುತ್ತದೆ. ಭಗವಾನ್ ಬುದ್ಧ ಇಡೀ ಜೀವನದಲ್ಲಿ ಒಂದೇ ಒಂದು ತಪ್ಪು ಮಾಡದೆ ಭಗವಾನನಾಗಿದ್ದಾನೆ ಎಂದರು
ಉಪನ್ಯಾಸಕರಾಗಿ ಆಗಮಿಸಿದ್ದ ಗದುಗಿನ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಪಂಚಶೀಲ ಭುಜಂಗೆ ಮಾತನಾಡಿ, ಬುದ್ಧನ ಪ್ರಮುಖ ನುಡಿಯಾದ ಬುದ್ಧಂ, ಶರಣಂ ಗಚ್ಛಾಮಿ ಎಂಬುದಾಗಿದ್ದು, ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಬೇಕು, ಪರಾವಲಂಬಿಗಳಾಗಿರಬಾರದು. ನಾನು ಕೇವಲ ನಿಮಗೆ ಮಾರ್ಗ ತೋರಿಸುತ್ತೇನೆ. ಸಾಧಿಸುವುದು, ಬಿಡುವುದು ನಿಮಗೆ ಬಿಟ್ಟಿದ್ದು. ಇದರ ಅರ್ಥ ಪಂಚಶೀಲಗಳಾದ ಪ್ರಾಣಿ ಹತ್ಯೆ, ಕಳ್ಳತನ ಮತ್ತು ಮೋಸತನ ಮಾಡದಿರುವುದು, ಸುಳ್ಳು ಮಾತನಾಡದಿರುವುದು, ಮದ್ಯವ್ಯಸನದಿಂದೂ ದೂರ ಉಳಿಯುವುದು, ಏಕ ಪತ್ನಿ ವ್ರತ ಮುಂತಾದವುಗಳನ್ನು ಪಾಲಿಸಿ ಪ್ರತಿಯೊಬ್ಬರು ಭವದಿಂದ ಮುಕ್ತನಾಗಬೇಕೆಂಬುದು ಬುದ್ಧನ ಸಂದೇಶವಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುಂಚೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಸಮುದಾಯದ ಮುಖಂಡ ಶಾಮಸುಂದರ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸ್ವಾಗತಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.