ಸಾರಾಂಶ
ಕನ್ನಡಪ್ರಭ ವಾರ್ತೆ ದೇವಲಾಪೂರ
ಬೈಲಹೊಂಗಲ ತಾಲೂಕಿನ ಸುಕ್ಷೇತ್ರ ದೇವಲಾಪೂರ ಗ್ರಾಮದೇವತೆ ಉಡಚಮ್ಮದೇವಿ 18ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ 22 ರವರೆಗೆ ಜರುಗುವುದು. ಸಾನ್ನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಮಹಾಸ್ವಾಮಿಗಳು ಬೈಲಹೊಂಗಲ ಶಿವಾನಂದ ಮಠದ ಮಹದೇವ ಸರಸ್ವತಿ ಸ್ವಾಮಿಗಳು ವಹಿಸುವರು.ಏ.22 ರಂದು ಬೆಳಗ್ಗೆ 6 ಗಂಟೆಗೆ ಮಹಾಭಿಷೇಕ, ಬೆಳಗ್ಗೆ 9 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಯ ರಥದಲ್ಲಿ ಶ್ರೀಗಳ ಹಾಗೂ ಆನೆಯ ಮೇಲೆ ಶ್ರೀ ಉಡಚಮ್ಮದೇವಿಯ ಬೆಳ್ಳಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ, ಶಿಕ್ಷಕ ಶಶಿಧರ ಮಲ್ಲಪ್ಪ ಕಮ್ಮಾರ ಅವರಿಂದ ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ. ಸಂಜೆ 5 ಗಂಟೆಗೆ ಆನೆಯ ಮೇಲೆ ದೇವಿಯ ಬೆಳ್ಳಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಜೊತೆಗೆ ಮಹಾರಥೋತ್ಸವ ನೆರವೇರುವುದು. ರಾತ್ರಿ 10.30 ಗಂಟೆಗೆ ಇಮಾಮ್ ಕೆರೂರ ನೇತೃತ್ವದಲ್ಲಿ ಕೆರೂರ ಮೆಲೋಡಿಸ್ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರಗುವುದು. ನೇತೃತ್ವವನ್ನು ಮಲ್ಲಾಪುರ ಗಾಲೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಹುಣಸ್ಯಾಳ ಪಿ.ಜಿ.ಸಿದ್ದಲಿಂಗ ಕೈವಲ್ಲ್ಯಾಶ್ರಮದ ನಿಜಗುಣ ದೇವರು, ಚಿಕ್ಕ ಮುನವಳ್ಳಿ ಆರೂಢಮಠ ಶಿವಪುತ್ರ ಮಹಾಸ್ವಾಮಿಗಳು ವಹಿಸುವರು ಎಂದು ದೇವಸ್ಥಾನದ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ, ಉಡಚಮ್ಮದೇವಿ ಸದ್ಭಕ್ತ ಮಂಡಳಿ ಹಾಗೂ ಗ್ರಾಮದ ಎಲ್ಲ ಸಂಘಟನೆಗಳ ಸರ್ವ ಸದಸ್ಯರು, ಗ್ರಾಮದ ಎಲ್ಲ ಭಜನಾ ಮಂಡಳಿಗಳ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.