ಆರಂಭಗೊಳ್ಳದ ಹೆಸರು ಖರೀದಿ ಕೇಂದ್ರ: ರೈತರ ಪರದಾಟ

| Published : Sep 14 2024, 01:51 AM IST

ಸಾರಾಂಶ

ಆಳಂದ ತಾಲೂಕಿನ 30 ಕೇಂದ್ರಗಳಲ್ಲೂ ಹೆಸರು ಖರೀದಿ ಇಲ್ಲ. ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿ ಎಂದು ತಹಸೀಲ್ದಾರ್‌ ಅಣ್ಣಾರಾವ್ ಪಾಟೀಲ ಎಪಿಎಂಸಿ ಕಾರ್ಯದರ್ಶಿಗಳನ್ನು ಶುಕ್ರವಾರ ತಮ್ಮ ಕಚೇರಿಗೆ ಕರೆಯಿಸಿ ಮಾಹಿತಿ ಕಲೆ ಹಾಕಿದರು.

ಕನ್ನಡಪ್ರಭ ವಾರ್ತೆ ಆಳಂದ

ಪ್ರಸಕ್ತ ಸಾಲಿನ ಅಲ್ಪಾವಧಿ ಬೆಳೆ ಹೆಸರು ಖರೀದಿಗೆ ಸರ್ಕಾರ ಆದೇಶಿಸಿದರೂ ಸಹ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರು ಖರೀದಿ ಆರಂಭವಾಗಿಲ್ಲ. ಈ ಹಿಂದೆಯೇ ನಡೆಯಬೇಕಿದ್ದ ಬೆಳೆ ಸಮೀಕ್ಷೆಗೆ ಸಂಬಂಧಿತ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಗೊಂದಲ ಕಂಡಿದೆ. ಹೀಗಾಗಿ ತಾಲೂಕಿನ 30 ಖರೀದಿ ಕೇಂದ್ರಗಳಲ್ಲೂ ತಾಂತ್ರಿಕ ಬಿಕ್ಕಟ್ಟಾಗಿ ಹೆಸರು ಖರೀದಿ ಆರಂಭವಾಗಿಲ್ಲ.

ಈ ಕುರಿತ ಸ್ವತಃ ತಹಸೀಲ್ದಾರ್‌ ಅಣ್ಣಾರಾವ್ ಪಾಟೀಲ ಎಪಿಎಂಸಿ ಕಾರ್ಯದರ್ಶಿಗಳನ್ನು ಶುಕ್ರವಾರ ತಮ್ಮ ಕಚೇರಿಗೆ ಕರೆಯಿಸಿ ಮಾಹಿತಿ ಕಲೆ ಹಾಕಿ, ಖರೀದಿ ಪ್ರಕ್ರಿಯೆ ತುರ್ತು ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಅಡೆ, ತಡೆ ನಿವಾರಣೆಗೆ ಕ್ರಮ ವಹಿಸಬೇಕು ಎಂದಿದ್ದಾರೆ.

ಖರೀದಿ ಕೇಂದ್ರಕ್ಕೆ 15 ದಿನಗಳ ಹಿಂದೆಯೇ ಸರ್ಕಾರ ಸೂಚನೆ ನೀಡಿದೆ. ಆದರೆ ತಾಂತ್ರಿಕ ಅಡೆ, ತಡೆ ನಿವಾರಣೆಗೆ ವಿಳಂಬದಿಂದಾಗಿ ರೈತರನ್ನು ಪರದಾಡುವಂತೆ ಮಾಡಿದೆ. ಸರ್ಕಾರದ ಬೆಳೆ ದರ್ಶಕ ಆ್ಯಪ್‍ನಲ್ಲಿ ಬಹುತೇಕ ರೈತರ ಬೆಳೆ ಸಮೀಕ್ಷೆಗೆ ವಿಳಂಬವಾಗಿದೆ. ಈಗ ಹೆಸರು ಉತ್ಪಾದಿತ ರೈತರು ಮಾರಾಟಕ್ಕೆ ಮುಂದಾಗಿ ಖರೀದಿ ಕೇಂದ್ರಗಳಿಗೆ ಹೋದರೆ, ಕೇಂದ್ರಗಳಿಗೆ ಸರ್ಕಾರ ನೀಡಿದ ಖರೀದಿ ಆಪ್‍ನಲ್ಲಿ ಬೆಳೆ ನಮೂದಿತವಾಗಿಲ್ಲ ಎಂದು ತೋರಿಸುತ್ತಿದೆ. ಇದರಿಂದಾಗಿ ತಾಲೂಕಿನ ಯಾವ ಖರೀದಿ ಕೇಂದ್ರದಲ್ಲೂ ಹೆಸರು ಖರೀದಿಯ ಪ್ರಕ್ರಿಯೆ ಆರಂಭವಾಗಿಲ್ಲ.

ಪಿಆರ್‌ಒ ಮುನಿಸು: ಬೆಳೆ ದರ್ಶಕ ಆ್ಯಫ್‍ನಲ್ಲಿ ಬೆಳೆ ನೋಂದಾಯಿತ ರೈತರ ಬೆಳೆ ಮಾತ್ರ ಖರೀದಿಸಲು ಸರ್ಕಾರದ ನಿಯಮವಿದೆ. ತಮ್ಮ ಗೌರವ ಧನ ಹೆಚ್ಚಿಸಬೇಕು ಎಂದು ಬೆಳೆ ಸಮೀಕ್ಷಾ ಪಿಆರ್‌ಗಳು ಮುನಿಸಿಕೊಂಡು ಸಮೀಕ್ಷೆಗೆ ಹಿಂದೇಟು ಹಾಕಿದ್ದರು. ಕೊನೆ ಘಳಿಗೆಯಲ್ಲಿ ಸರ್ವೆಗೆ ಮುಂದಾಗಿದ್ದು, ಈಗ ಬೆಳೆ ದರ್ಶಕ ಆ್ಯಫ್‍ನಲ್ಲಿ ಬೆಳೆ ನೋಂದಾಯಿಸಲಾಗುತ್ತಿದೆ ಎಂದು ತಹಸೀಲ್ದಾರ್‌ ಅಣ್ಣಾರಾವ್ ಪಾಟೀಲ ಹೇಳಿದ್ದಾರೆ.

ಬೆಲೆ ಕುಸಿತ: ಮಾರುಕಟ್ಟೆಯಲ್ಲಿ ಹೆಸರು, ಉದ್ದಿನ ಬೆಲೆ ತೀರಾ ಕುಸಿದಿದೆ. ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಕ್ಕೂ ಹೋಗಿ ಮಾರಾಟ ಮಾಡಬೇಕೆಂದರೂ ರೈತರಿಗೆ ತಾಂತ್ರಿಕ ಬಿಕ್ಕಟ್ಟಿನಿಂದ ರೈತ ನೊಂದುಕೊಂಡಿದ್ದಾನೆ. ಈ ನಡುವೆ 10 ದಿನಗಳಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು, ರೈತರು ಖರೀದಿ ಕೇಂದ್ರಕ್ಕೆ ಬರುತ್ತಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಹೇಳುತ್ತಿದ್ದಾರೆ.ಖರೀದಿ ಆರಂಭಗೊಂಡಿಲ್ಲ: ತಹಸೀಲ್ದಾರ್‌

ದ್ವಿದಳ ಧಾನ್ಯ ಅಭಿವೃದ್ಧಿ ನಿಗಮಕ್ಕೆ ಹೆಸರು ಖರೀದಿಗೆ ವಹಿಸಲಾಗಿದೆ. ಇದರಲ್ಲಿ 32 ಸಂಸ್ಥೆಗಳಿಗೆ ನೋಟಿಫಿಕೇಷನ್ ಆಗಿದೆ. ಇದರಲ್ಲಿನ 14 ಕೇಂದ್ರಗಳಲ್ಲಿ ಮಾತ್ರ ಲಾಗಿನ್‌ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್‌ ಅಣ್ಣಾರಾವ್‌ ಪಾಟೀಲ ಹೇಳಿದರು.

ಇನ್ನುಳಿದ ಖರೀದಿ ಕೇಂದ್ರದವರೆ ಲಾಗಿನ್‍ ಮಾಡಿಕೊಂಡಿಲ್ಲ. ಇನ್ನೂ ಮಾರಾಟದ ನೋಂದಣಿಗೆ ರೈತರು ಮುಂದೆ ಬಂದಿಲ್ಲ. ಹೊರಗಡೆ ದರ ಹೆಚ್ಚಿರಬಹುದು. ಆ.25ಕ್ಕೆ ಬೆಳೆ ಸರ್ವೆ ಮುಗಿದಿತ್ತು. ಆರಂಭದಲ್ಲಿ ಕೇಂದ್ರಗಳಿಗೆ ನೀಡಿದ ಬೆಳೆ ಸರ್ವೆ ದರ್ಶಕ ಆ್ಯಫ್‍ನಲ್ಲಿ ತೋರಿಸಿರಲಿಲ್ಲ. ಈ ಮೇಲಿನ ಸಂಸ್ಥೆಗೆ ಹೆಸರು ಖರೀದಿಗೆ ಅನುಮತಿ ಕೊಟ್ಟರೆ ಮತ್ತೊಂದಡೆ ಮಾರುಕಟ್ಟೆ ಫೆಡರಢಷನ್‌ ಎಂಬ ಸಂಸ್ಥೆಗೆ ಉದ್ದು, ಸೋಯಾ ಖರೀದಿಗೆ 15 ಕೇಂದ್ರಗಳಿಗೆ ನೋಟಿಫಿಕೇಷನ್ ಆಗಿದೆ. ಆದರೆ ಇಲ್ಲೂ ಸಹ ನೋಂದಣಿಯೇ ಮಾಡಿಕೊಂಡಿಲ್ಲ. ಹೀಗಾಗಿ ಖರೀದಿ ಪ್ರಕ್ರಿಯೆ ಆರಂಭಗೊಂಡಿಲ್ಲ. ಆರಂಭದಲ್ಲಿ ಬೆಳೆ ಸರ್ವೇ ತೊಂದರೆಯಾಗಿತ್ತು. ಈಗ ಸರಿಯಾಗಿದೆ ಸಂಬಂಧಿತರು ಖರೀದಿ ಪ್ರಕ್ರಿಯೆ ಆರಂಭಿಸಬೇಕಿದೆ.