ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ:
ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದು ಏನು?. 1974ರಿಂದ ಇಲ್ಲಿಯ ವರೆಗೆ ಏಕೆ ಹೋರಾಟ ಮಾಡಿಲ್ಲ?. ಬಿಜೆಪಿ ಅಧಿಕಾರಾವಧಿಯಲ್ಲೂ ವಕ್ಫ್ ಪರ ನೋಟಿಸ್ ನೀಡಲಾಗಿದೆ, ಪಹಣಿಯಲ್ಲಿ ವಕ್ಪ್ ಎಂದು ನಮೂದು ಮಾಡಲಾಗಿದೆ. ಅವರ ಕಾಲದಲ್ಲಿ ಗೆಜೆಟ್ ಬಗ್ಗೆ ಯಾಕೆ ಹೋರಾಟ ಮಾಡಿಲ್ಲ ಎಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದರು.ವಕ್ಪ್ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನಮ್ಮಭೂಮಿ ನಮ್ಮಹಕ್ಕು ಎಂದು ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ತಿರುಗೇಟು ನೀಡಿದರು. ಬಿಜೆಪಿ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ವಕ್ಪ್ ಪರ ಭರವಸೆ ನೀಡಿದ್ದರು. ಸಚಿವೆ ಶೋಭಾ ಕರಂದ್ಲಾಜೆ ಸಂಸತ್ನಲ್ಲಿ ವಕ್ಫ್ ಪರವಾಗಿ ಪ್ರಶ್ನೆ ಕೇಳಿದ್ದರು. ನಂತರ ವಕ್ಫ್ ವಿರುದ್ಧ ಹೋರಾಟ ಮಾಡಿದ್ದಾರೆ. ಈಗ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ವಕ್ಪ್ ವಿಚಾರದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮದ್ಯೆ ಪೈಪೋಟಿ ನಡೆದಿದೆ. ವಕ್ಫ್ ಹೋರಾಟದ ಕ್ರೆಡಿಟ್ ಗಾಗಿ ಅವರವರಲ್ಲೇ ಹೋರಾಟ ನಡೆದಿದೆ ಎಂದರು.
ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆ ಹಾಗೂ ಮಹಾರಾಷ್ಟ್ರ, ಜಾರ್ಖಂಡ ವಿಧಾನಸಭಾ ಚುನಾವಣೆ ಮತ ಎಣಿಕೆ ಫಲಿತಾಂಶ ಪ್ರಕಟವಾಗುವ ಹಿನ್ನೆಲೆ ಮಾತನಾಡಿ, ಉಪ ಚುನಾವಣೆ, ಮಹಾರಾಷ್ಟ್ರದ ಹಾಗೂ ಜಾರ್ಖಂಡ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಕಾಂಗ್ರೆಸ್ ಗೆಲುವು ಪಡೆಯಲಿದೆ ಎಂಬ ವಿಶ್ವಾಸವಿರುವುದಾಗಿ ತಿಳಿಸಿದರು.ಉದ್ಯಮಿ ಗೌತಮ್ ಅದಾನಿ ಮೇಲೆ ಅಮೆರಿಕ ಕೋರ್ಟ್ನಿಂದ ವಾರೆಂಜ್ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ತಪ್ಪು ಮಾಡಿದವರ ಮೇಲೆ ಕ್ರಮವಾಗುತ್ತದೆ. ಯಾರಾದರೇನು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ಅದೊಂದು ಕಾನೂನು ಪ್ರಕ್ರಿಯೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.