ಸಾರಾಂಶ
ಯೂನುಸ್ ಮೂಲಿಮನಿ
ಕನ್ನಡಪ್ರಭ ವಾರ್ತೆ ನಾಲತವಾಡನಾಲತವಾಡ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಸದಸ್ಯರ ಪಾಳಯದಲ್ಲಿ ತೆರೆಮರೆಯಲ್ಲಿ ಭಾರಿ ರಾಜಕೀಯ ಬೆಳವಣಿಗೆ ಪ್ರಾರಂಭವಾಗಿದೆ.ಒಟ್ಟು 14 ಸದಸ್ಯರ ಬಲ ಹೊಂದಿರುವ ನಾಲತವಾಡ ಪಟ್ಟಣ ಪಂಚಾಯತಿಗೆ ಕಾಂಗ್ರೆಸ್ 9, ಜೆಡಿಎಸ್ 1 ಹಾಗೂ ಪಕ್ಷೇತರ 4 ಸದಸ್ಯರು ಒಳಗೊಂಡಂತೆ ಕಾಂಗ್ರೆಸ್ಗೆ ನಿಚ್ಚಳ ಬಹುಮತವಿದೆ. ಕಾಂಗ್ರೆಸ್ ಪಕ್ಷದಲ್ಲಿ 4 ಜನರ ಪ್ರಬಲ ಪೈಪೋಟಿ ಇದ್ದು, ಯಾರನ್ನು ಅಧ್ಯಕ್ಷ ಮಾಡಬೇಕೆಂಬುವುದೇ ಈಗ ಸವಾಲು ಎದುರಾಗಿದೆ.ವಾರ್ಡ್ ನಂ.8ರ ಅಭ್ಯರ್ಥಿ ಬಶೀರಾಬೇಗಂ ಮೂಲಿಮನಿ, ವಾರ್ಡ್ ನಂ.7ರ ಅಭ್ಯರ್ಥಿ ಲಲಿತಾ ದೊಡ್ಡನಗೌಡ ಗೊರಬಾಳ, ವಾರ್ಡ್ ನಂ.4ರ ವಿಜಯಲಕ್ಷೀ ಇಲಕಲ್, ವಾರ್ಡ್ ನಂ.1ರ ರಾಜಬಿ ನಾಡದಾಳ ಅಧ್ಯಕ್ಷ ಸ್ಥಾನಕ್ಕೆ ಹೆಸರು ಕೇಳಿಬರುತ್ತಿದೆ. ಅಧ್ಯಕ್ಷರನ್ನಾಗಿ ಮಾಡಬೇಕೆಂದು ಈಗಾಗಲೇ ಲಾಬಿ ಕೂಡ ಜೋರಾಗಿದೆ. ನಾಲ್ಕು ಜನರಲ್ಲಿ ಶಾಸಕರ ಒಲವು ಯಾರಿಗೆ? ಅಧ್ಯಕ್ಷ ಸ್ಥಾನ ಯಾರಿಗೆ ಸಿಗುವುದು ಎನ್ನುವುದೇ ಸದ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.ಉಪಾಧ್ಯಕ್ಷ ಸ್ಥಾನದ್ದೆ ಹೆಚ್ಚು ಚರ್ಚೆ:
ಸಾಮಾನ್ಯ ಕ್ಷೇತ್ರದ ಉಪಾಧ್ಯಕ್ಷ ಸ್ಥಾನದ ಬಗ್ಗೆ ಪಟ್ಟಣದಲ್ಲಿ ಈಗ ಹೆಚ್ಚು ಚರ್ಚೆ ಶುರುವಾಗಿದೆ. ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಯುವಕರ ತಂಡ ಪಕ್ಷೇತರರಾಗಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದರು. ಇದರಲ್ಲಿ ಇವರಿಬ್ಬರ ಕಾರ್ಯತಂತ್ರ ವರ್ಕೌಟ್ ಆಗಿ ಬಿಜೆಪಿಗೆ ಖಾತೆ ತೆರೆಯದಂತೆ ಮಾಡಿದ್ದರು. ಅದಾದ ನಂತರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯರು ಸೇರಿದಂತೆ ಪ್ರತಿಷ್ಠಿತ ದೇಶಮುಖ ಮನೆತನವು ಕೂಡ ಕಾಂಗ್ರೆಸ್ಗೆ ಬೆಂಬಲ ಸೂಚಿಸಿತು. ಪಕ್ಷೇತರರನ್ನು ಕಟ್ಟಿದ ಮುಖಂಡ ಮಹಾಂತೇಶ ಗಂಗನಗೌಡರ ಕೂಡ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಆದರೆ, ಈಗ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಎಲ್ಲಿಲ್ಲದ ಪೈಪೋಟಿ ಶುರುವಾಗಿದೆ. ಇದರಲ್ಲಿ ಪ್ರಮುಖವಾಗಿ ಪಕ್ಷೇತರ (ಕಾಂಗ್ರೆಸ್ ಬೆಂಬಲಿತ) ವೈದ್ಯ ಸದಸ್ಯರಾದ ಶರಣಬಸು ಗಂಗನಗೌಡರ, ಬಸವರಾಜ ಗಂಗನಗೌಡರ, ಕಾಂಗ್ರೆಸ್ ಸದಸ್ಯ ಸಂಗಪ್ಪ ಬಾರಡ್ಡಿ ಮತ್ತು ಜೆಡಿಎಸ್ ಸದಸ್ಯ(ಕಾಂಗ್ರೆಸ್ ಬೆಂಬಲಿತ) ಬಾಬು ಕ್ಷತ್ರಿ ಅವರು ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.ಗೊಂದಲ ಸೃಷ್ಟಿ:ಪಟ್ಟಣ ಪಂಚಾಯತಿ ಚುನಾವಣೆ ನಂತರ ಪಕ್ಷೇತರ ಟೀಂ ದೇಶಮುಖ ಅವರ ವಾಡೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಶಾಸಕರ ಗೆಲವಿಗೆ ಶ್ರಮಿಸಿದ್ದರು. ಮುಂದೆ ಎಲ್ಲ ಸಭೆ ಸಮಾರಂಭದಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿದ್ದರು. ಆದರೆ, ಯಾವಾಗ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ಹೊರಬಿತ್ತು, ನಮ್ಮ ಪಕ್ಷೇತರರಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕೆಂಬ ಲಾಬಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ವಲಯದಲ್ಲಿ ಕೇಳಿಬರುತ್ತಿದೆ. ಆದರೆ, ಮೂಲ ಕಾಂಗ್ರೆಸ್ಸಿಗರು ಎಲ್ಲರೂ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಪಕ್ಷೇತರರು ಅಂತ ಹೇಳಿಕೊಂಡು ತಿರುಗಾಡಿದರೆ ಹೇಗೆ? ಸಾಮಾನ್ಯ ಸ್ಥಾನಕ್ಕೆ ಲಾಬಿ ಮಾಡಿ. ಆದರೆ, ಪಕ್ಷೇತರ ಟೀಂ ಅನ್ನುವುದು ಸೂಕ್ತ ಕಾಣುವುದಿಲ್ಲ ಅಂತ ಆಕ್ಷೇಪಗಳು ವ್ಯಕ್ತವಾಗುತ್ತಿವೆ.ಒಟ್ಟಿನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆ ಈಗ ಶಾಸಕರಾದ ಸಿ.ಎಸ್.ನಾಡಗೌಡ ಹಾಗೂ ದೇಶಮುಖ ಮನೆತನದವರು ಕೂಡಿಕೊಂಡು ನಿರ್ಣಯ ಮಾಡುತ್ತಾರೆ. ಅವರು ಯಾರಿಗೆ ಆಯ್ಕೆ ಮಾಡುತ್ತಾರೆ ಅವರೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯುವುದು ಪಕ್ಕಾ.ಕಳೆದ ಬಾರಿ ಕೂಡ ಕ್ಷತ್ರಿ ಸಮಾಜಕ್ಕೆ ಉಪಾಧ್ಯಕ್ಷ ಸ್ಥಾನ ಖಚಿತವಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಬದವಾಣೆಯಾಯಿತು. ಈ ಬಾರಿ ನಮ್ಮ ಸಮಾಜಕ್ಕೆ ಶಾಸಕರು ಹಾಗೂ ದೇಶಮುಖರು ಆದ್ಯತೆ ನೀಡುತ್ತಾರೆಂಬ ವಿಶ್ವಾಸವಿದೆ.
-ಬಾಬು ಕ್ಷತ್ರಿ, ಉಪಾಧ್ಯಕ್ಷ ಪ್ರಬಲ ಆಕಾಂಕ್ಷಿ ಸದಸ್ಯರು.