ಸಾರಾಂಶ
ಕನ್ನಡ ಪ್ರಭ ವಾರ್ತೆ ಕಡೂರು
ಕುರುಡರಿಗೆ ಏನು ಮಾಡಿ ತೋರಿಸಿದರೂ ಅದು ಕಾಣುವುದಿಲ್ಲ. ಗಾಯತ್ರಿ ಶಾಂತೇಗೌಡರು ತಮ್ಮ ರಾಜಕೀಯದ ದೃಷ್ಟಿದೋಷದಿಂದ ಹೊರ ಬಂದು ನೋಡಿದರೆ ನಾನು ಶಾಸಕನಾಗಿ ಏನು ಮಾಡಿದ್ದೇನೆ ಎಂಬುದು ಕಾಣುತ್ತದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಖಾರವಾಗಿ ಟಾಂಗ್ ನೀಡಿದರು.ಕಡೂರು ತಾಲೂಕಿನ ಸಖರಾಯಪಟ್ಟಣದ ಅಯ್ಯನಕೆರೆಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಮ್ಮ ಬಿಜೆಪಿ ಮುಖಂಡರೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿದರು. ನಾಲ್ಕು ಭಾರಿ ಶಾಸಕರಾಗಿದ್ದ ಸಿ.ಟಿ ರವಿ ಅವರು, ಚಿಕ್ಕಮಗಳೂರು ಕ್ಷೇತ್ರಕ್ಕೆ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ ಎಂಬ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸಿದ್ದು ಯಾರವ್ವಾ, ಕೆರೆ ತುಂಬಿಸುವ ಯೋಜನೆಗೆ 1281 ಕೋಟಿ ರು. ಯಾರು ತಂದರು?, ಕಡೂರು- ಚಿಕ್ಕಮಗಳೂರು ರಸ್ತೆ, ಚಿಕ್ಕಮಗಳೂರು- ಬೇಲೂರು, ಚಿಕ್ಕಮಗಳೂರು- ಹಾಸನದ ರಸ್ತೆ ಅಭಿವೃದ್ಧಿ ಮಾಡಿಸಿದ್ದು ಯಾರು ತಾಯಿ ಎಂದು ಕುಟುಕಿದರು.
32 ಕೋಟಿ ರು.ನ ಬಸವನಹಳ್ಳಿ ಕೆರೆ ಕಾಮಗಾರಿಯಲ್ಲಿ ಕಲ್ಲು ಹಾಕಿ ಭ್ರಷ್ಟಾಚಾರ ನಡೆದಿದೆ ಎಂದು ಅಪಪ್ರಚಾರ ಮಾಡಿ ಕಾಮಗಾರಿ ನಿಲ್ಲಿಸಿದವರು ಯಾರು ಎಂದು ಪ್ರಶ್ನಿಸಿ, ವಿಘ್ನ ಸಂತೋಷಿಗಳು ಕಾಮಗಾರಿಗೆ ಅಡ್ಡಿಪಡಿಸಿದರು. ನೂತನ ಡೀಸಿ ಕಟ್ಟಡ ಮಂಜೂರು ಮಾಡಿಸಿದ್ದು, ಕೋರ್ಟ್ ಕಟ್ಟಡ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಯಾರು ತಾಯಿ ಮಾಡಿಸಿದ್ದು ಎಂದು ಪ್ರಶ್ನಿಸಿದರು.? ರಾಜಕೀಯವಾಗಿ ತಮಗೆ ಆಗಿರುವ ದೃಷ್ಟಿ ದೋಷವನ್ನು ಸರಿಪಡಿಸಿಕೊಂಡು ನೋಡಿದರೆ ಎಲ್ಲವೂ ಕಾಣುತ್ತದೆ ಎಂದು ಸಲಹೆ ನೀಡಿದರು.ಹಿಂದೆ ಸರಕಾರಿ ಹುದ್ದೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಿರಲಿಲ್ಲ. ವರ್ಗಾವಣೆಗೆ ಹಣ ತೆಗೆದುಕೊಂಡು ನನಗೆ ಅಭ್ಯಾಸವಿಲ್ಲ. ಈಗ ಲೆಟರ್ಗೆ ದುಡ್ಡು ಎಂಬ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಕರ ಕ್ಷೇತ್ರದಲ್ಲೂ ಭ್ರಷ್ಟಾಚಾರ ನಡೆಯಿತು ಎಂದು ಹೇಳಿ, ನಾವು ವಾಜಪೇಯಿ ಬಡಾವಣೆ ನಿರ್ಮಾಣ ಮಾಡಿದ್ದೇವೆ ಈ ರೀತಿ ಬಹಳಷ್ಟು ಇದ್ದು ಅಭಿವೃದ್ಧಿ ಕಾರ್ಯ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಎಲ್ಲೆಡೆ ಉತ್ತಮ ಮಳೆ ಬಂದಿರುವ ಕಾರಣದಿಂದ ಕೆರೆಕಟ್ಟೆಗಳಲ್ಲಿ ನೀರು ತುಂಬಿರುವುದು ಸಂತಸ ಸಂಗತಿ. ಹಾಗಾಗಿ ಕೆರೆಗೆ ಬಾಗಿನ ಅರ್ಪಿಸಿ ನಮ್ಮ ಕೃತಜ್ಞತೆ ಸಲ್ಲಿಸುತ್ತಿದ್ದು, ಗಿಡ, ಮರ, ಪ್ರಕೃತಿಯು ದೇವರೆಂದು ಪೂಜಿಸುತ್ತೇವೆ.
ತಾವು ಅಯ್ಯನಕೆರೆ ಅಭಿವೃದ್ಧಿಗೆ 3.50 ಕೋಟಿ ರು. ಮಂಜೂರು ಮಾಡಿಸಿದ್ದೆ ಅದನ್ನು ಪರಿಶೀಲಿಸಬೇಕಿದ್ದು, ಅದಕ್ಕೆ ತಮಗೆ ಸಂವಿಧಾನದ ಬದ್ಧ ಸ್ಥಾನಮಾನ ಇಲ್ಲದ ಕಾರಣ ಸುಮ್ಮನಿದ್ದೆ. ಇದೀಗ ವಿಧಾನ ಪರಿಷತ್ ಹುದ್ದೆ ನೀಡಿದ್ದು, ಕಾಮಗಾರಿ ಪರಿಶೀಲನೆ ಮಾಡುತ್ತೇನೆ. ಇಲ್ಲಿ, ಸೈಕ್ಲಿಂಗ್ ಟ್ರ್ಯಾಕ್ ಮಾಡುವ ಚಿಂತನೆ ಇದೆ ಎಂದರು.ಈಗಿರುವ ಸರ್ಕಾರಕ್ಕೆ ಅವುಗಳನ್ನು ಕೇಳಿದರೂ ದುಡ್ಡಿಲ್ಲ ಎಂದು ಗ್ಯಾರಂಟಿ ಕಡೆ ತೋರಿಸುತ್ತದೆ. ಜನ ನೋಡಿದರೆ ದುಡ್ಡು ಬಂದಿಲ್ಲ ಎನ್ನುತ್ತಾರೆ ಎಂದು ದೂರಿದರು, ಮುಡಾಕ್ಕೆ ಸಂಭಂದಿಸಿದಂತೆ ನಮ್ಮ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ಎಲ್ಲ ಗೊತ್ತಿದ್ದರೂ ಕಳ್ಳನ ಡ್ಯಾಶ್ ಆಗಲೇಬೇಕು. ಯಾರು ತಪ್ಪಿಸಲು ಸಾಧ್ಯವಿಲ್ಲ ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆ ಆಗುತ್ತದೆ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ, ಬೆಳವಾಡಿ ರವೀಂದ್ರ, ಸಿ.ಎಚ್ ಲೋಕೇಶ್, ಲೋಕೇಶ್, ಮಿಥುನ್ ಗೌಡ, ದಿನೇಶ್ ಪ್ರವೀಣನಾಯ್ಕ, ನಂದೀಶ್, ಯೋಗೀಂದ್ರ ಪುರುಷೋತ್ತಮ್ ಸೇರಿದಂತೆ ಮತ್ತಿತರರು ಇದ್ದರು.