ಎಚ್ ಎಸ್ ವಿ ನನ್ನ ಹಿತೈಷಿ - ಪ್ರತಿಭಾ ನಂದಕುಮಾರ್‌

| N/A | Published : May 31 2025, 05:00 AM IST

Hs Venkateshamurthy

ಸಾರಾಂಶ

ಎಚ್ ಎಸ್ ವಿ ಅವರು ನನ್ನ ಹಿತೈಷಿಯಾಗಿದ್ದರು. ನನ್ನ ಬೆಳವಣಿಗೆ, ಯಶಸ್ಸು ಕಂಡು ಸಂಭ್ರಮಿಸುತ್ತಿದ್ದರು. ನನಗೆ ಪುತಿನ ಪ್ರಶಸ್ತಿ ಬಂದಾಗ ನನಗಿಂತ ಹೆಚ್ಚು ಸಂತೋಷ ಪಟ್ಟಿದ್ದರು. ನನ್ನ ಕವನಗಳನ್ನು ಪ್ರೀತಿಯಿಂದ ಓದಿ ಪ್ರತಿಕ್ರಿಯಿಸುತ್ತಿದ್ದರು.

ಎಚ್ ಎಸ್ ವಿ ಅವರು ನನ್ನ ಹಿತೈಷಿಯಾಗಿದ್ದರು. ನನ್ನ ಬೆಳವಣಿಗೆ, ಯಶಸ್ಸು ಕಂಡು ಸಂಭ್ರಮಿಸುತ್ತಿದ್ದರು. ನನಗೆ ಪುತಿನ ಪ್ರಶಸ್ತಿ ಬಂದಾಗ ನನಗಿಂತ ಹೆಚ್ಚು ಸಂತೋಷ ಪಟ್ಟಿದ್ದರು. ನನ್ನ ಕವನಗಳನ್ನು ಪ್ರೀತಿಯಿಂದ ಓದಿ ಪ್ರತಿಕ್ರಿಯಿಸುತ್ತಿದ್ದರು.

‘ಶತಕದ ಕಾವ್ಯ’ ಅಂತ ಅವರು ನೂರು ವರ್ಷಗಳ ನೂರು ಸಾನೆಟ್ ಗಳ ಸಂಕಲನ ತಂದರು. ಅದರಲ್ಲಿ ಕವಯತ್ರಿಯ ಸಾನೆಟ್ ಇದ್ದದ್ದು ನನ್ನೊಬ್ಬಳದ್ದೇ. ಅದನ್ನು ಅವರು ಸಂಭ್ರಮದಿಂದ ಹೇಳಿದರು. ‘ಹೆಂಗಸು ಅನ್ನುವ ಕಾರಣಕ್ಕೆ ರಿಯಾಯಿತಿ ಕೊಟ್ಟು ಇದರಲ್ಲಿ ನಿಮ್ಮ ಕವಿತೆ ಹಾಕಿದ್ದಲ್ಲ. ನಿಜಕ್ಕೂ ಒಳ್ಳೆಯ ಸಾನೆಟ್’ ಎಂದು ಮನಸಾರೆ ಹೇಳಿದ್ದರು. ಇನ್ನಷ್ಟು ಸಾನೆಟ್ ಬರಿ ಅನ್ನುತ್ತಿದ್ದರು. ಅವರೇ ಪ್ರಸಿದ್ಧ ಸಾಹಿತಿಗಳ ಬಗ್ಗೆ ಸಾನೆಟ್ ಗಳನ್ನು ರಚಿಸಿ ಸಂಕಲನ ತಂದಿದ್ದಾರೆ. ಅದರಲ್ಲಿ ನನ್ನ ಮೇಲೆ ಒಂದು ಸುನೀತ ಬರೆದಿದ್ದಾರೆ. ಅದನ್ನೋದಿ ನನ್ನ ಕಣ್ಣಲ್ಲಿ ನೀರು ಬಂದಿತ್ತು. ಕೆವಿ ತಿರುಮಲೇಶ್ ಹೇಳುತ್ತಿದ್ದರು ಎಲ್ಲಕ್ಕಿಂತ ಅದ್ಭುತ ಸಾನೆಟ್ ಅದು ಅಂತ. ಅದನ್ನು ನನ್ನ ಎರಡು ಪುಸ್ತಕಗಳಿಗೆ ಬೆನ್ನುಡಿಯಾಗಿ ಬಳಸಿಕೊಂಡಿದ್ದೇನೆ.

ಈಚೆಗೆ ಅವರ ಕವಿತೆಗಳ ಇಂಗ್ಲಿಷ್ ಅನುವಾದ ಪ್ರಕಟ ಮಾಡಬೇಕು ಅಂತ ನಿರ್ಧಾರವಾದಾಗ ಅವರು ಸ್ವಲ್ಪ ಸಂಕೋಚದಿಂದ ‘ನಂದೊಂದು ಕವಿತೆ ಇಂಗ್ಲಿಷಿಗೆ ಅನುವಾದ ಮಾಡ್ಕೊಡ್ತೀಯ’ ಅಂತ ಕೇಳಿದರು. ‘ಒಂದ್ಯಾಕೆ ಸರ್, ಹತ್ತು ಮಾಡ್ತೀನಿ’ ಅಂತ ಅನುವಾದಿಸಿದೆ. ಅವರು ಅದನ್ನು ಓದಿ ಥ್ರಿಲ್ ಆದರು. ‘ಎಷ್ಟು ಅದ್ಭುತವಾಗಿ ಮಾಡಿದ್ದೀಯ!’ ಅಂತ ಮುಕ್ತವಾಗಿ ಹೊಗಳಿದರು.

ನಾವು ಹಲವಾರು ವೇದಿಕೆಗಳಲ್ಲಿ ಒಟ್ಟಿಗಿದ್ದೆವು. ಯಾವತ್ತೂ ನನ್ನ ಭಾಷಣವಾಗಲೀ ಕವಿತೆಯಾಗಲೀ ಮೆಚ್ಚಿ ಶಭಾಷ್ ಹೇಳಲು ಮರೆಯುತ್ತಿರಲಿಲ್ಲ. ಅವರ ಮನೆಯಲ್ಲಿ ಕವಿಗೋಷ್ಠಿ ಮಾಡುತ್ತಿದ್ದರು. ಅವರ ಪತ್ನಿ ಬದುಕಿದ್ದಾಗ ಮನೆಗೆ ಬರುವ ಕವಿಗಳಿಗೆಲ್ಲ ಚೆನ್ನಾಗಿ ಸತ್ಕಾರ ಮಾಡುತ್ತಿದ್ದರು. ಪತ್ನಿಯ ಅಗಲಿಕೆ ಅವರನ್ನು ಬಹಳ ಕಾಡಿತು.

ಒಂದು ಸಲ ಅವರ ನೇತೃತ್ವದಲ್ಲಿ ಒಂದು ಕವಿಗೋಷ್ಠಿ ನಡೆಯಬೇಕಿತ್ತು. ಅದಕ್ಕೆ ಅವರು ಮೂರು ತಲೆಮಾರಿನ ಕವಿಗಳನ್ನು ಆರಿಸಿದ್ದರು. ಆದರೆ ಜಾತಿ ವಿಚಾರವನ್ನು ಎಳೆದುತಂದು ಈ ಕವಿಗೋಷ್ಠಿಯನ್ನು ಸೋಷಲ್ ಮೀಡಿಯಾದಲ್ಲಿ ಬಹಳ ಟ್ರೋಲ್ ಮಾಡಿ ಬಿಟ್ಟರು. ಇದು ಅವರಿಗೆ ಬಹಳ ನೋವು ತಂದು ಆ ಕವಿಗೋಷ್ಠಿಯನ್ನೇ ರದ್ದು ಮಾಡಿಬಿಟ್ಟರು. ಯಾರೋ ಏನೋ ಹೇಳಿದರೆ ನೀವ್ಯಾಕೆ ಕ್ಯಾನ್ಸಲ್ ಮಾಡ್ತೀರಿ ಅಂತ ಎಷ್ಟು ಹೇಳಿದರೂ ಅವರು ಒಪ್ಪಲೇ ಇಲ್ಲ. ಕವಿಗೋಷ್ಠಿ ಅನ್ನೋದು ಸಂಭ್ರಮದಲ್ಲಿ ಆಗುವ ಕಾರ್ಯಕ್ರಮ, ಹಾಲಲ್ಲಿ ಹನಿ ವಿಷ ಸೇರಿಸಿದರೆ ಹಾಲೆಲ್ಲಿ ಉಳಿಯುತ್ತದೆ ಎಂಬರ್ಥದಲ್ಲಿ ಮಾತನಾಡಿದರು.

ಎಚ್ ಎಸ್ ವಿ ಅವರು ಕಾವ್ಯ, ಅಧ್ಯಾತ್ಮ, ಪ್ರಣಯ, ನಾಟಕ, ವಿಮರ್ಶೆ, ಅನುವಾದ, ಕಲೆ, ಮಕ್ಕಳ ಸಾಹಿತ್ಯ, ಚಿತ್ರ ಸಾಹಿತ್ಯ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಕೈಯಾಡಿಸಿ ತಮ್ಮದೇ ಒಂದು ವಿಶಿಷ್ಟ ಸ್ಥಾನ ಗಳಿಸಿಕೊಂಡರು. ಅವರ ಆ ಚೈತನ್ಯದ ಕುರಿತೇ ಬೆರಗು ಇತ್ತು. ಕೊನೆಕೊನೆಗೆ ಒಂದು ಕಾರ್ಯಕ್ರಮಕ್ಕೆ ಅವರು ಇಬ್ಬರ ಹೆಗಲಿನ ಮೇಲೆ ತೋಳಿಟ್ಟು ಕಷ್ಟಪಟ್ಟು ವೇದಿಕೆಗೆ ಬಂದರು. ಆದರೆ ಅವರ ಮಾತಿನಲ್ಲಿ ಅದೇ ಹಿಂದಿನ ಚೈತನ್ಯ ಇತ್ತು. ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹೋದಾಗ ಅವರ ನಿರ್ಜಿವ ಮುಖವನ್ನು ನೋಡಲು ಬಹಳ ಸಂಕಟವಾಯಿತು. ಆದರೆ ಅವರ ಕೃತಿಗಳಲ್ಲಿ ಅವರು ಶಾಶ್ವತವಾಗಿ ಬದುಕಿರುತ್ತಾರೆ.

Read more Articles on