ಸಾರಾಂಶ
ಬೆಂಗಳೂರು : ರೈಲ್ವೆ ಅಪಘಾತ ಪ್ರಕರಣದಲ್ಲಿ ಮೃತ ವ್ಯಕ್ತಿಯ ಜೇಬಿನಲ್ಲಿ ರೈಲ್ವೆ ಟಿಕೆಟ್ ದೊರಕಲಿಲ್ಲವೆಂಬ ಕಾರಣಕ್ಕೆ ಆತನ ಕುಟುಂಬ ಸದಸ್ಯರು ಪರಿಹಾರ ಪಡೆಯಲು ಅನರ್ಹರು ಎನ್ನುವಂತಿಲ್ಲ ಎಂದು ಆದೇಶಿಸಿರುವ ಹೈಕೋರ್ಟ್, ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ನಿರ್ದೇಶಿಸಿದೆ.
ಹತ್ತು ವರ್ಷಗಳ ಹಿಂದೆ ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದ ವಿಜಯಪುರದ ಅಮಿನಾಸಾಬ್ ಮುಲ್ಲಾ ಅವರ ಪತ್ನಿ ಹಾಗೂ ಮಕ್ಕಳಿಗೆ 8 ಲಕ್ಷ ರು. ಪರಿಹಾರ ನೀಡುವಂತೆ ರೈಲ್ವೇ ಇಲಾಖೆಗೆ ನಿರ್ದೇಶಿಸಿದೆ.
ಪ್ರಕರಣದಲ್ಲಿ ತಮಗೆ ಪರಿಹಾರ ನಿಗದಿಪಡಿಸಲು ನಿರಾಕರಿಸಿದ್ದ ರೈಲ್ವೇ ಪರಿಹಾರ ಕ್ಲೇಮು ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಮೃತ ಅಮಿನಾಸಾಬ್ ಮುಲ್ಲಾ ಅವರ ಪತ್ನಿ ಮತ್ತು ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದರೆ, 2015ರ ಏ.6ರಂದು ವಿಜಯಪುರ ಮತ್ತು ಮಿಂಚಿನಹಾಳ ರೈಲು ನಿಲ್ದಾಣಗಳ ಮಧ್ಯೆ ರೈಲು ಟ್ರ್ಯಾಕ್ನಲ್ಲಿ ಪುರುಷನ (ಅಮಿನಾಸಾಬ್ ಮುಲ್ಲಾ) ಮೃತದೇಹ ಪತ್ತೆಯಾಗಿದೆ ಎಂದು ಪೈಲಟ್ ವಾಕಿಟಾಕಿ ಮೂಲಕ ರೈಲ್ವೇ ಲೋಕೋ ಸಂದೇಶ ನೀಡಿದ್ದಾರೆ. ಆ ಸಂಬಂಧ ಎಫ್ಐಆರ್ ಸಹ ದಾಖಲಾಗಿದೆ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಗಾಯಗಳಾಗಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಎಲ್ಲ ದಾಖಲೆಗಳು ಆತ ರೈಲ್ವೆ ಅಪಘಾತದಲ್ಲೇ ಮೃತಪಟ್ಟದ್ದಾಗಿ ಖಚಿತಪಡಿಸುತ್ತವೆ ಎಂದು ನ್ಯಾಯಪೀಠ ತಿಳಿಸಿದೆ.
ಘಟನೆ ನಡೆದ ತಕ್ಷಣ ವ್ಯಕ್ತಿಯ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಹುಶಃ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಟಿಕೆಟ್ ಕಳೆದುಹೋಗಿರಬಹುದು. ಟಿಕೆಟ್ ಜೇಬಿನಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಮೃತನ ಕುಟುಂಬ ಸದಸ್ಯರು ಪರಿಹಾರಕ್ಕೆ ಅನರ್ಹರು ಎಂದು ಹೇಳುವಂತಿಲ್ಲ. ಸಾವಿನಿಂದ ಆಘಾತಕ್ಕೆ ಒಳಗಾಗಿದ್ದರಿಂದ ಆ ಸಂದರ್ಭದಲ್ಲಿ ಆತನ ಕುಟುಂಬದ ಸದಸ್ಯರು ಟಿಕೆಟ್ ಬಗ್ಗೆ ಆಲೋಚಿಸಿ ಅದನ್ನು ಸಂಗ್ರಹಿಸಿಟ್ಟುಕೊಂಡು ನ್ಯಾಯಾಲಯಕ್ಕೆ ಸಲ್ಲಿಸದಿರಬಹುದು. ಹಾಗೆಂದ ಮಾತ್ರ ಮೃತನ ಕುಟುಂಬ ಪರಿಹಾರಕ್ಕೆ ಅರ್ಹವಲ್ಲವೆಂದು ಹೇಳಲಾಗದು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
ಅಂತಿಮವಾಗಿ ಮೃತನ ಮತ್ತು ಮಕ್ಕಳಿಗೆ ಘಟನೆ ನಡೆದ ದಿನದಿಂದ ಬಡ್ಡಿ ಸಹಿತ 8 ಲಕ್ಷ ರು. ಪರಿಹಾರ ಪಾವತಿ ಮಾಡುವಂತೆ ರೈಲ್ವೇ ಇಲಾಖೆಗೆ ನಿರ್ದೇಶಿಸಿದೆ.
ಪ್ರಕರಣದ ವಿವರ:
ಅಮಿನಾಸಾಬ್ ಮುಲ್ಲಾ 2015ರ ಏ.6ರಂದು ವಿಜಯಪುರ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಲಿಂಬಾಲಾಗೆ ತೆರಳಲು ಟಿಕೆಟ್ ಖರೀದಿಸಿ ರೈಲು ಏರಿದ್ದರು. ಆದರೆ, ರೈಲು ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಸ್ಥಳದಲ್ಲೇ ಅಸುನೀಗಿದ್ದರು. ಇದರಿಂದ ಮೃತನ ಕುಟುಂಬ ಪರಿಹಾರ ನೀಡುವಂತೆ ರೈಲ್ವೆ ಪರಿಹಾರ ಕ್ಲೇಮು ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿತ್ತು.
ಅಪಘಾತದಲ್ಲಿ ಅಮಿನಸಾಬ್ ಮೃತಪಟ್ಟಿರುವ ಬಗ್ಗೆ ಯಾವುದೇ ಮಾಹಿತಿಯನ್ನು ರೈಲ್ವೆಗೆ ನೀಡಿಲ್ಲ. ಸಾವನ್ನಪ್ಪಿರುವ ಪ್ರಯಾಣಿಕರ ಜೇಬಿನಲ್ಲಿ ಟಿಕೆಟ್ ದೊರೆತಿಲ್ಲ. ಹಾಗಾಗಿ ಪರಿಹಾರ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧಿಕರಣ ಆದೇಶಿಸಿತ್ತು. ಇದರಿಂದ ಮೃತನ ಪತ್ನಿ ಮತ್ತು ಹಾಗೂ ಮಕ್ಕಳು ಹೈಕೋರ್ಟ್ ಮೆಟ್ಟಿಲೇರಿದ್ದರು.