ಸಾರಾಂಶ
ದಾವಣಗೆರೆ : ಇದೇ ಅವಧಿಯಲ್ಲೇ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತೆ ಭವಿಷ್ಯ ನುಡಿದಿದ್ದಾರೆ.
ಜಗಳೂರು ತಾಲೂಕು ಸೊಕ್ಕೆ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಮಠ, ರೈತಾಪಿ ಜನ, ವರ್ತಕರು, ರಾಜಕೀಯ ಮುತ್ಸದ್ದಿಗಳು, ಬಡವರು, ಜನರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂಬ ಸಂಕಲ್ಪದಲ್ಲಿ ಭಾಗಿಯಾಗಿದ್ದಾರೆ ಎಂದರು.
ನಮ್ಮೆಲ್ಲರ ಸಂಕಲ್ಪದ ಮೇರೆಗೆ ಡಿ.ಕೆ.ಶಿವಕುಮಾರ್ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆಂಬ ಭರವಸೆ ನೀಡುತ್ತೇನೆ. ಇದೇ ಅವಧಿಯಲ್ಲಿ ಸಿದ್ದರಾಮಯ್ಯ ಏನು ಮಾತು ಕೊಟ್ಟಿದ್ದಾರೋ, ಆ ಸಮಯ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಬಿಟ್ಟು ಕೊಡುತ್ತಾರೆ. ಹೈಕಮಾಂಡ್ ಸಹ ಒಪ್ಪುತ್ತಾರೆ ಎಂದು ಹೇಳಿದರು.
ಡಿಕೆಶಿ ಅವರು ಶ್ರೀಮಠದ ಭಕ್ತನಾಗಿ, ಶ್ರೀಮಠದ ಮಗನಾಗಿ ನಿರಂತರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಯಾವಾಗಲೂ ನೊಣವಿನಕೆರೆ ಮಠಕ್ಕೆ ಡಿ.ಕೆ.ಶಿವಕುಮಾರ್ ಬಂದು ಸೇವೆ ಮಾಡುತ್ತಾರೆ. ಆದರೆ, ರಾಜಕೀಯ ವಿಚಾರವಾಗಿ ಬರುವುದಿಲ್ಲ. ಡಿ.ಕೆ.ಶಿವಕುಮಾರ್ಗೆ ಆರೋಗ್ಯವಂತರಾಗಿ, ಜನರ ಸೇವೆ ಮಾಡಲು ಅವಕಾಶ ಒದಗಿ ಬರಲಿ ಎಂದು ಆಶೀರ್ವಾದ ಮಾಡುತ್ತೇವೆ ಎಂದು ತಿಳಿಸಿದರು.
ಹಿಂದಿನ ಗುರುಪೂರ್ಣಿಮೆಗೆ ಹೇಳಿದ್ದೆ, ಈಗಲೂ ಹೇಳ್ತೇನೆ:
ಸರ್ಕಾರದ ಕೆಲಸದಲ್ಲಿ ಡಿ.ಕೆ.ಶಿವಕುಮಾರ್ ಮುಂದಿದ್ದಾರೆ. ಶಿವಕುಮಾರ್ ಹೋರಾಟ ನಡೆಸಿದ್ದಕ್ಕೆ ನೀವೇ ಸಾಕ್ಷಿ ಇದ್ದೀರಿ. ಈ ಬಾರಿ ಮುಖ್ಯಮಂತ್ರಿಯಾಗಿ ಡಿಕೆಶಿ ಅಧಿಕಾರವನ್ನೂ ಹಿಡಿಯಲಿದ್ದಾರೆ. ಇದೇ ಅವಧಿಯಲ್ಲೇ ಮುಖ್ಯಮಂತ್ರಿಯೂ ಆಗಲಿದ್ದಾರೆ. ಕಳೆದ ಸಲ ಗುರುಪೂರ್ಣಿಮೆಗೆ ಇಲ್ಲಿಗೆ ಬಂದಾಗಲೂ ಹೇಳಿದ್ದೆವು. ಈಗಲೂ ಹೇಳುತ್ತಿದ್ದೇವೆ ಎಂದರು.
ಸತ್ಯ ಸಾಯಿ, ಶ್ರೀ ಶಿರಡಿ ಸಾಯಿಬಾಬಾರ ಆಶೀರ್ವಾದ, ಬಾಳೆಹೊನ್ನೂರು ಜಗದ್ಗುರುಗಳ ಆಶೀರ್ವಾದ, ನಮ್ಮ ಆಶೀರ್ವಾದದಿಂದ ನಮ್ಮ ಮಠದ ಮಗನಾದ ಡಿಕೆಶಿ ವಿಜೇತರಾಗಿ, ಮುಕ್ತವಾಗಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನೂ ಸ್ವೀಕರಿಸುತ್ತಾರೆ. ಈ ಗುರುಪೂರ್ಣಿಯಂದೇ ಅವರಿಗೆ ಆಶೀರ್ವಾದ ಮಾಡುತ್ತೇವೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂದರು.