ನಿವೇಶನಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಲು ಕಾಯ್ದೆ ರೂಪಿಸಿ: ಶಾಸಕ ಆರಗ

| Published : Jul 16 2025, 01:30 AM IST

ನಿವೇಶನಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಲು ಕಾಯ್ದೆ ರೂಪಿಸಿ: ಶಾಸಕ ಆರಗ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಮಬದ್ಧವಾಗಿ ಖರೀದಿಸಿರುವ ನಿವೇಶನಗಳಿಗೆ ತಾಂತ್ರಿಕ ಕಾರಣಗಳ ತೊಡಕಿನಿಂದ ಅಧಿಕೃತ ದಾಖಲೆಗಳು ದೊರೆಯದ ಹಿನ್ನೆಲೆಯಲ್ಲಿ ನಿವೇಶನಗಳನ್ನು ಖರೀದಿಸಿದ ಮಾಲೀಕರುಗಳು ಮೂಲ ಸೌಲಭ್ಯಗಳಿಗಾಗಿ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿ: ಕ್ರಮಬದ್ಧವಾಗಿ ಖರೀದಿಸಿರುವ ನಿವೇಶನಗಳಿಗೆ ತಾಂತ್ರಿಕ ಕಾರಣಗಳ ತೊಡಕಿನಿಂದ ಅಧಿಕೃತ ದಾಖಲೆಗಳು ದೊರೆಯದ ಹಿನ್ನೆಲೆಯಲ್ಲಿ ನಿವೇಶನಗಳನ್ನು ಖರೀದಿಸಿದ ಮಾಲೀಕರುಗಳು ಮೂಲ ಸೌಲಭ್ಯಗಳಿಗಾಗಿ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಪಂಚಾಯ್ತಿ ವತಿಯಿಂದ ಮಂಗಳವಾರ ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನಗಳನ್ನು ಖರೀದಿಸಿದ 100 ನಿವೇಶನಗಳ ಮಾಲೀಕರಿಗೆ ಬಿ ಖಾತಾ ಮತ್ತು ಇ-ಸೊತ್ತು ದಾಖಲೆಗಳನ್ನು ವಿತರಿಸಿ ಅವರು ಮಾತನಾಡಿದರು.

ರಾಜಧಾನಿಯಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳಿಗೆ ಗ್ರಾಮೀಣ ಪ್ರದೇಶಗಳ ಸಮಸ್ಯೆ ಅರಿವಿಲ್ಲದ ಕಾರಣ ಹಲವಾರು ಗೊಂದಲಗಳು ನಿರ್ಮಾಣವಾಗುತ್ತವೆ. ಸರ್ಕಾರ ಕ್ರಮಬದ್ದವಾಗಿರುವ ನಿವೇಶನಗಳಿಗೆ ಗೊಂದಲಕ್ಕೆ ಅವಕಾಶವಾಗದಂತೆ ಸೂಕ್ತ ದಾಖಲೆಗಳನ್ನು ಒದಗಿಸಲು ಕಾಯ್ದೆ ರೂಪಿಸಬೇಕಿದೆ ಎಂದರು.ಕೆಲವೊಂದು ಸಮಸ್ಯೆಗಳು ಸರ್ಕಾರದ ಮಟ್ಟದಿಂದಲೇ ಉದ್ಭವವಾಗುತ್ತವೆ. ಸುಪ್ರೀಂಕೋರ್ಟಿನ ತೀರ್ಪೊಂದನ್ನು ಆಧರಿಸಿ ಇಡೀ ರಾಜ್ಯಕ್ಕೆ ಅದನ್ನು ಅನ್ವಯಿಸಿದ ಪರಿಣಾಮ ಈ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ನಿವೇಶನಗಳ ಮಾಲೀಕರಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಸಾಲ ಸೌಲಭ್ಯಗಳೂ ದೊರೆಯುತ್ತಿಲ್ಲಾ. ಬೆಂಗಳೂರಿನಲ್ಲಿ ಐಎಎಸ್ ಅಧಿಕಾರಿಗಳು ಕೂಡಾ ಇಂತಹ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ತಿಳಿಸಿದರು.ಬೆಂಗಳೂರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ದೊಡ್ಡ ಮಾಫಿಯಾ ಇದೆ. ಒರಿಜಿನಲ್ ದಾಖಲೆಗಳನ್ನು ಮೀರಿಸುವಂತೆ ಆಕರ್ಷಕವಾಗಿ ದಾಖಲೆಗಳನ್ನು ಸಿದ್ಧಪಡಿಸುತ್ತಾರೆ. ಇಲ್ಲಿನ ಪಪಂ ಪುರಸಭೆಯಾಗಿದ್ದ ಅವಧಿಯಲ್ಲೂ ಅಂತಹ ನೂರಾರು ಪ್ರಕರಣಗಳು ನಡೆದಿದ್ದವು. ಪಟ್ಟಣ ವ್ಯಾಪ್ತಿ ಮಾತ್ರವಲ್ಲದೇ ಕೋಣಂದೂರಿನವರೆಗೂ ಅಂತಹಾ ಪ್ರಕರಣಗಳು ನಡೆದಿದ್ದವು ಎಂದು ಹೇಳಿದರು.ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ, ಇದೊಂದು ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, 2017ರಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಈ ಅವಕಾಶ ಆಗಸ್ಟ್ 10ನೇ ತಾರೀಕಿನವರೆಗೆ ಮಾತ್ರ ಇರುತ್ತದೆ. ಅಷ್ಟರಲ್ಲಿ ನಿವೇಶನಗಳ ಮಾಲೀಕರು ಪಪಂಗೆ ಸೂಕ್ತ ದಾಖಲೆಗಳನ್ನು ನೀಡಿ ಬಿ ಖಾತಾ ದಾಖಲೆಗಳನ್ನು ಪಡೆಯಬಹುದಾಗಿದೆ. ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ 7 ಲೇಔಟ್‍ಗಳಲ್ಲಿ 140 ನಿವೇಶನಗಳಿಗೆ ಈ ಸಮಸ್ಯೆ ಇದ್ದು ಈ ದಿನ 100 ನಿವೇಶನಗಳ ದಾಖಲೆಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ್, ಪಪಂ ಸದಸ್ಯರು ಹಾಗೂ ಲೇ ಔಟ್ ಮಾಲೀಕರು ಮತ್ತು ನಿವೇಶನಗಳ ಖರೀದಿದಾರರು ಇದ್ದರು.