ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮಕ್ಕಳಿಗೆ ಇಂಗ್ಲಿಷ್ ಭಾಷೆ ಎನ್ನುವುದು ಕಬ್ಬಿಣದ ಕಡಲೆ. ಆದರೆ, ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡಿ ಅವರ ಪ್ರೀತಿಯನ್ನು ಗಳಿಸುವುದು ಸುಲಭದ ಮಾತವಲ್ಲ. ಈ ಕಲೆ ಕೆಲವು ಶಿಕ್ಷಕರಲ್ಲಿ ಮಾತ್ರ ಇರುತ್ತದೆ. ಅಂತವರಲ್ಲೊಬ್ಬರು ಸವದತ್ತಿ ತಾಲೂಕಿನ ಬೆನಕಟ್ಟಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಎಂ.ಜೆ.ಅರಕೇರಿ. ಇವರು ತಮ್ಮ ವೃತ್ತಿಯನ್ನು ಪ್ರೀತಿಸಿ ವಿದ್ಯಾರ್ಥಿಗಳಿಗೆ ಪಾಲಿಗೆ ಬೋಧಕ ಮಾತ್ರವಲ್ಲ, ಮಾರ್ಗದರ್ಶಕ ಕೂಡ ಆಗಿದ್ದಾರೆ.
7 ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅರಕೇರಿ ಅವರು ಮಕ್ಕಳಿಗೆ ವಿಶಿಷ್ಟವಾಗಿ ಪಾಠ ಹೇಳಿಕೊಡುತ್ತಾರೆ. ಇದರಲ್ಲೇನಪ್ಪ ವಿಶೇಷ ಎಂದುಕೊಂಡಿರಾ? ಅವರ ಬೋಧನೆ ವಿಧಾನ ವಿಶಿಷ್ಟ. ಜೊತೆಗೆ ಹಲವು ಬೇರೆ ಉಪಯುಕ್ತ ಕೆಲಸಗಳನ್ನು ಕೂಡ ಮಾಡುತ್ತಾರೆ. ಅವರ ಬೋಧನೆಯ ವಿಶೇಷವೆಂದರೇ ಮಕ್ಕಳಿಗೆ ದಿನಕ್ಕೊಂದು ಪ್ರಶ್ನೆ ಕೊಡುತ್ತಾರೆ. ಅದನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಬರೆಯಬೇಕು. ತಾವು ಏನು ಕಲಿತಿದ್ದಾರೋ, ಎಷ್ಟು ಅರ್ಥ ಮಾಡಿಕೊಂಡರೋ ಅದನ್ನು ತಾವೇ ಬರೆಯಬೇಕು. ಇದರಿಂದ ಮಕ್ಕಳಿಗೆ ಪರೀಕ್ಷೆಯಲ್ಲಿ ಸಹಾಯ ಆಗುತ್ತದೆ ಎಂಬುವುದು ಶಿಕ್ಷಕ ಅರಕೇರಿ ಅವರ ವಾದ.ಕೇವಲ ಪಠ್ಯಪುಸ್ತಕದಿಂದ ಮಕ್ಕಳಿಗೆ ಏನೂ ಪ್ರಯೋಜನವಾಗುವುದಿಲ್ಲ. ಅದರ ಜೊತೆ ಪಠ್ಯೇತರ ವಿಷಯಗಳು, ಅವರು ಪಾಠದಿಂದ ಜೀವನಕ್ಕೆ ಬೇಕಾದ್ದನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂಬುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ಅವರು.ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳದ ವಿದ್ಯಾರ್ಥಿಗಳನ್ನು ಪ್ರಾರಂಭದಲ್ಲೇ ಗುರುತಿಸುತ್ತೇವೆ. ಜಾಣ ವಿದ್ಯಾರ್ಥಿಗಳಿಗಿಂತ ಜಾಣರಲ್ಲದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಅವರಿಗೆ ಡ್ರಿಲ್ ವರ್ಕ್, ಪ್ರಾಕ್ಟೀಸ್ ಮಾಡಿಸಲಾಗುತ್ತದೆ. ವ್ಯಾಕರಣದ ಬಗ್ಗೆಯೂ ಒತ್ತಿ ಹೇಳಲಾಗುತ್ತದೆ. ಪಾಠದ ಜೊತೆಗೆ ಅವರಿಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಮಕ್ಕಳಿಗೆ ಹೆಲ್ಪಿಂಗ್ ವರ್ಬ್ ಮೂಲಕ ಇಂಗ್ಲೀಷನ್ನು ಸುಲಭವಾಗಿ ಕಲಿಸಲಾಗುತ್ತದೆ. ಇಲ್ಲಿ ಯಾವ ವಿದ್ಯಾರ್ಥಿಗಳೂ ಗುಡ್ ಮಾರ್ನಿಂಗ್ ಹೇಳುವಂತಿಲ್ಲ. ಬದಲಿಗೆ ಶಿಕ್ಷಕರು ತರಗತಿ ಪ್ರವೇಶಿಸುತ್ತಿದ್ದಂತೆಯೇ ಇಂಗ್ಲಿಷ್ ಪದ್ಯ ಹೇಳಬೇಕು. ಒಂದು ವಾಕ್ಯ ಬರೆಯಬೇಕು. ಅದನ್ನು ಓದುವುದು ಕಡ್ಡಾಯ. ಪಠ್ಯದಲ್ಲಿನ ಪಾತ್ರದ ಬಗ್ಗೆ ವ್ಯಕ್ತಿಗಳ ಪರಿಚಯವನ್ನು ಮಕ್ಕಳಿಗೆ ಮನಮುಟ್ಟುವಂತೆ ಪರಿಚಯಿಸಲಾಗುತ್ತದೆ. ಬಳಿಕ ಅವರಿಗೆ ಕೆಲಸ ಕೊಡುತ್ತೇವೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪದೆ ಪದೇ ಪಠ್ಯ ಮತ್ತು ಪದ್ಯವನ್ನು ಪುನರ್ ಮನನ ಮಾಡಲಾಗುತ್ತದೆ. ಹಾಗಾಗಿ, ಕನ್ನಡದ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಯುವುದು ಸುಲಭವಾಗಿದೆ ಎನ್ನುತ್ತಾರೆ ಶಿಕ್ಷಕ ಅರಕೇರಿ.