ಸಾರಾಂಶ
ಕಾರ್ಮಿಕ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪಟ್ಟಣದ 3 ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಐವರು ಬಾಲಕ ಕಾರ್ಮಿಕರನ್ನು ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ರಕ್ಷಿಸಿದ್ದಾರೆ. ಬಾಲಕಾರ್ಮಿಕರ ಕುರಿತು ಕಾರ್ಮಿಕ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ದಾಳಿ ಮಾಡಿ ಐವರು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ.ಪಟ್ಟಣದ ಪಿಸಿಬಿ ಮಟಲ್ ಸ್ಟಾಲ್ ಎಂಬಲ್ಲಿ ಇಬ್ಬರು ಹಾಗೂ ಅಂಚೆ ಕಚೇರಿ ಸಮೀಪದ ಫುಡ್ ಕೋರ್ಟ್ ನ ಎರಡು ಕ್ಯಾಂಟೀನ್ ಗಳಲ್ಲಿ ಮೂವರು ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಿಗ್ಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿವಶಕ್ಕೆ ಪಡೆದರು. ಇವರಲ್ಲಿ ನಾಲ್ವರು ಬಾಲಕರು ಅಸ್ಸಾಂ ಮೂಲದವರಾಗಿದ್ದು, ಓರ್ವ ಬಾಲಕ ಶಿವಮೊಗ್ಗದವನು ಎಂದು ತಿಳಿದು ಬಂದಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇರಿಸಿಕೊಂಡಿದ್ದ 3 ಅಂಗಡಿಗಳ ಮಾಲೀಕರಿಗೂ ಕಾರ್ಮಿಕ ಇಲಾಖೆ ನೊಟೀಸ್ ನೀಡಿದ್ದು, ಕಾರ್ಮಿಕ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಮಾಲೀಕರನ್ನು ಶೀಘ್ರ ವಿಚಾರಣೆಗೆ ಕರೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಶಕ್ಕೆ ಪಡೆದ 5 ಬಾಲಕರನ್ನು ಚಿಕ್ಕಮಗಳೂರಿನ ಸರ್ಕಾರಿ ಬಾಲಕರ ಪಾಲನೆ, ಪೋಷಣೆಯನ್ನು ಬಾಲ ಮಂದಿರಕ್ಕೆ ತಾತ್ಕಾಲಿಕವಾಗಿ ನೀಡಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸುರೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತ ರೇವಣ್ಣ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಚೆಲುವರಾಜ್, ಹನುಮಂತಪ್ಪ, ಪ್ರವೀಣ್, ಜೀವನ್ಕುಮಾರ್. ಪೊಲೀಸ್ ಸಿಬ್ಬಂದಿ ಮೋಹನ್, ಸಿಆರ್ಪಿ ಮಾಲತೇಶ್, ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್ ಮತ್ತಿತರರು ಹಾಜರಿದ್ದರು.೦೮ಬಿಹೆಚ್ಆರ್ ೨:ಬಾಳೆಹೊನ್ನೂರಿನ ವಿವಿಧ ಅಂಗಡಿಗಳಲ್ಲಿ ಬಾಲಕಾರ್ಮಿಕರನ್ನು ನಿಯೋಜಿಸಿಕೊಂಡು ದೂರು ಬಂದ ಹಿನ್ನೆಲೆಯಲ್ಲಿ ಕಾರ್ಮಿಕ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದರು.