ಕನ್ನಡಪ್ರಭ ವಾರ್ತೆ ಮುಧೋಳ
ಘಟಪ್ರಭಾ ನದಿ ಮೇಲ್ಭಾಗದ ಪ್ರದೇಶದಲ್ಲಿ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಹಿಡಕಲ್ ಮತ್ತು ಇತರೆ ಜಲಾಶಯಗಳಿಂದ ಘಟಪ್ರಭಾ ನದಿಗೆ ಗುರುವಾರ ಮತ್ತು ಶುಕ್ರವಾರ ಒಳಹರಿವು ಕಡಿಮೆಯಾಗಿದ್ದು, ಮುಧೋಳ-ಯಾದವಾಡ ಸೇತುವೆ ಮೇಲೆ ಹರಿಯುತ್ತಿರುವ ನೀರಿನ ಪ್ರಮಾಣ ಒಂದೆರೆ ಅಡಿ ಕಡಿಮೆಯಾಗಿದೆ. ಆದರೂ ಇನ್ನೆರಡು ದಿನಗಳವರೆಗೆ ಸಂಚಾರ ಸ್ಥಗಿತವಾಗಲಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.ಜಾನುವಾರುಗಳಿಗೆ ಮೇವಿನ ವ್ಯವಸ್ಥೆ:ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಸ್ ಅವರು ಶುಕ್ರವಾರ ತಾಲೂಕಿನ ಮಿರ್ಜಿ ಗ್ರಾಮಕ್ಕೆ ಭೇಟಿ ನೀಡಿ ಮಿರ್ಜಿ ಗ್ರಾಮದ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿರುವ ಸಂತ್ರಸ್ತರ ಕುಟುಂಬ ಸದಸ್ಯರನ್ನು ಮಾತನಾಡಿಸಿ ಅವರ ಯೋಗಕ್ಷೇಮ ವಿಚಾರಿಸಿದ್ದರು. ಜಾನುವಾರುಗಳಿಗೆ ಮೇವಿನ ಕೊರತೆ ಇರುವ ಬಗ್ಗೆ ಸಂತ್ರಸ್ತರು ಹೇಳಿಕೊಂಡಿದ್ದರು. ಶನಿವಾರ ತಾಲೂಕು ಆಡಳಿತ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾದೆ.ಉತ್ತೂರ ಶಿವಶರಣ ಮಂಟಪ ಜಲಾವೃತ:ತಾಲೂಕಿನ ಉತ್ತೂರ ಗ್ರಾಮದ ಘಟಪ್ರಭಾ ನದಿ ದಂಡೆಯಲ್ಲಿರುವ ಶ್ರೀ ಶಿವರಣ ಮಂಟಪ ಜಲಾವೃತಗೊಂಡಿದ್ದರಿಂದ ಭಕ್ತರು ನೀರಿನಲ್ಲಿಯೇ ಹೋಗಿ ಮಂಟಪಕ್ಕೆ ಪೂಜೆ ಪುನಸ್ಕಾರ ಮಾಡಿ ದರ್ಶನ ಪಡೆಯುತ್ತಿದ್ದಾರೆ.
ಅಪಾರ ಪ್ರಮಾಣದ ಬೆಳೆಹಾನಿ: ಘಟಪ್ರಭಾ ನದಿಯ ಪ್ರವಾಹದಿಂದ ನದಿ ದಂಡೆಯ ಹೊಲಗದ್ದೆಗಳು ಜಲಾವೃತಗೊಂಡಿದ್ದು, ರೈತರು ಬೆಳೆದ ಬೆಳೆಗಳು ನೀರಲ್ಲಿ ಮುಳುಗಿ ಕೊಳೆತು ಹೋಗಿವೆ. ಅಪಾರ ಪ್ರಮಾಣದ ಬೆಳೆಹಾನಿ ಆಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.