ಫೀನಿಕ್ಸ್‌ನಂತೆ ಎದ್ದುಬಂದ ಕಾಂಗ್ರೆಸ್‌

| Published : Jun 05 2024, 08:07 AM IST

rahul gandhi

ಸಾರಾಂಶ

10 ವರ್ಷಗಳ ಹಿಂದೆ ನರೇಂದ್ರ ಮೋದಿಯವರ ಅಬ್ಬರದ ಗೆಲುವಿನ ಬಳಿಕ ನೆಲಕಚ್ಚಿದ್ದ 140 ವರ್ಷಗಳ ಇತಿಹಾಸವಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಈ ಬಾರಿಯ ಲೋಕಸಭೆ ಚುನಾವಣೆಯ ಮೂಲಕ ಪುನಃ ಫೀನಿಕ್ಸ್‌ ಹಕ್ಕಿಯಂತೆ ಎದ್ದುಬಂದಿದೆ.

 ನವದೆಹಲಿ :  10 ವರ್ಷಗಳ ಹಿಂದೆ ನರೇಂದ್ರ ಮೋದಿಯವರ ಅಬ್ಬರದ ಗೆಲುವಿನ ಬಳಿಕ ನೆಲಕಚ್ಚಿದ್ದ 140 ವರ್ಷಗಳ ಇತಿಹಾಸವಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಈ ಬಾರಿಯ ಲೋಕಸಭೆ ಚುನಾವಣೆಯ ಮೂಲಕ ಪುನಃ ಫೀನಿಕ್ಸ್‌ ಹಕ್ಕಿಯಂತೆ ಎದ್ದುಬಂದಿದೆ. ಕಾಂಗ್ರೆಸ್‌ ಪಕ್ಷದ ಪುನರುತ್ಥಾನದ ಜೊತೆಗೇ ಬಿಜೆಪಿಗೆ ಪ್ರಬಲ ವಿರೋಧಿ ಶಕ್ತಿಯಾಗಿ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಕೂಡ ಎದ್ದುನಿಂತಿದೆ.

ಕಳೆದ ಎರಡು ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ನೀಡಲು ವಿಫಲವಾದ ಕಾಂಗ್ರೆಸ್‌ ಪಕ್ಷವು ಈ ಬಾರಿಯ ಚುನಾವಣೆಗೂ ಮುನ್ನ ಸಣ್ಣಪುಟ್ಟ ರಾಜಕೀಯ ಪಕ್ಷಗಳೆಲ್ಲ ಸೇರಿ ರಚಿಸಿಕೊಂಡ ಇಂಡಿಯಾ ಮೈತ್ರಿಕೂಟಕ್ಕೆ ತಾನೂ ಅಹಂ ಬಿಟ್ಟು ಸೇರ್ಪಡೆಗೊಂಡಿತ್ತು. ಆ ಪಕ್ಷಗಳಿಗೆ ಹೋಲಿಸಿದರೆ ಸಹಜವಾಗಿಯೇ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್‌, ಈಗ ಸೀಟು ಗಳಿಕೆ ಹೆಚ್ಚಿಸಿಕೊಂಡು ಇಂಡಿಯಾ ಮೈತ್ರಿಕೂಟಕ್ಕೆ ನೈಸರ್ಗಿಕ ನಾಯಕನಾಗಿ ಹೊರಹೊಮ್ಮಿದೆ.

ಶಕ್ತಿಹೀನವಾಗಿದ್ದ ಕಾಂಗ್ರೆಸ್‌ ಪಕ್ಷ ಮರಳಿ ಶಕ್ತಿ ಗಳಿಸಿಕೊಳ್ಳುವುದಕ್ಕೆ ಹಲವಾರು ಕಾರಣಗಳಿವೆ. ಪ್ರಮುಖವಾಗಿ, ಕರ್ನಾಟಕದ ಉಚಿತ ಯೋಜನೆಗಳ ಮಾದರಿಯನ್ನು ರಾಷ್ಟ್ರ ಮಟ್ಟದಲ್ಲೂ ಪ್ರಯೋಗಿಸಲು ಮುಂದಾಗಿದ್ದರಿಂದ ಮಹಿಳೆಯರ ಬೆಂಬಲ ತಕ್ಕಮಟ್ಟಿಗೆ ಲಭಿಸಿದೆ. ಇದಕ್ಕಿಂತಲೂ ಹೆಚ್ಚಾಗಿ, ಕಾಂಗ್ರೆಸ್‌ ಪಕ್ಷದ ಸೀಟು ಗಳಿಕೆ ಹೆಚ್ಚುವುದರಲ್ಲಿ ಬಿಜೆಪಿಯ ಕೊಡುಗೆಯೇ ಸಾಕಷ್ಟಿದೆ. ಸೇನೆಗೆ ಯುವಕರನ್ನು ಕಾಯಂ ನೇಮಕಾತಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಬದಲಿಸಿ ತಾತ್ಕಾಲಿಕ ನೇಮಕಾತಿಗೆ ಅಗ್ನಿವೀರ ಯೋಜನೆಯನ್ನು ತಂದಿರುವುದು ಯುವಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅದನ್ನು ಪ್ರಚಾರದ ಸರಕಾಗಿಸಿಕೊಂಡು ಬಿಜೆಪಿಯ ವಿರುದ್ಧ ತಿರುಗಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಅದರ ಜೊತೆಗೆ, ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟವನ್ನು ಸಂಘಟಿಸಿದ್ದು ಕೂಡ ಫಲ ನೀಡಿದೆ.

ಬಿಜೆಪಿ ಗೆದ್ದರೆ ಸಂವಿಧಾನ ಬದಲಿಸುತ್ತದೆ, ಬಿಜೆಪಿ ಶ್ರೀಮಂತರ ಪರವಾಗಿರುವ ಹಾಗೂ ಬಡವರ ವಿರೋಧಿಯಾಗಿರುವ ಪಕ್ಷ, ಉದ್ಯೋಗ ಸೃಷ್ಟಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಪ್ರಚಾರವನ್ನೂ ಕಾಂಗ್ರೆಸ್‌ ಪಕ್ಷ ಬಲವಾಗಿ ಮಾಡಿದ್ದು ಆ ಪಕ್ಷಕ್ಕೆ ಅನುಕೂಲ ಮಾಡಿಕೊಟ್ಟಿದೆ. ಕೆಲ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಇದ್ದ ಆಡಳಿತವಿರೋಧಿ ಅಲೆ ಹಾಗೂ ಉತ್ತರ ಪ್ರದೇಶದಲ್ಲಿ ನಿರೀಕ್ಷೆ ಮೀರಿ ಇಂಡಿಯಾ ಮೈತ್ರಿಕೂಟ ಮಾಡಿರುವ ಸಾಧನೆಯು ಕಾಂಗ್ರೆಸ್‌ನ ವರ್ಚಸ್ಸು ಹೆಚ್ಚಿಸುವಲ್ಲಿ ಯಶಸ್ವಿಯಾಗಿವೆ.

2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಬಳಿಕ ನರೇಂದ್ರ ಮೋದಿ ಪ್ರವರ್ಧಮಾನಕ್ಕೆ ಬಂದ ರೀತಿಯಿಂದಾಗಿ ಇನ್ನು 40 ವರ್ಷಗಳ ಕಾಲ ಬಿಜೆಪಿಗೆ ದೇಶದಲ್ಲಿ ಪ್ರಬಲ ವಿರೋಧ ಪಕ್ಷಗಳೇ ಇರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆ ಮಾತನ್ನು ಕೇವಲ 10 ವರ್ಷಗಳಲ್ಲಿ ಸುಳ್ಳಾಗಿಸುವ ಮೂಲಕ ಕಾಂಗ್ರೆಸ್‌ ತನ್ನಲ್ಲಿ ಇನ್ನೂ ಚೈತನ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ಇಂಡಿಯಾ ಮೈತ್ರಿಕೂಟಕ್ಕೆ ಅಧಿಕಾರ ಜಸ್ಟ್‌ ಮಿಸ್‌ ಆಗಲು ಏನು ಕಾರಣ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಲು ಈ ಬಾರಿಯ ಲೋಕಸಭೆ ಚುನಾವಣೆಗೂ ಮುನ್ನ ರಚನೆಯಾದ ‘ಇಂಡಿಯಾ’ ಮೈತ್ರಿಕೂಟ ಸ್ವಲ್ಪದರಲ್ಲೇ ಬಹುಮತದಿಂದ ವಂಚಿತವಾಗಿದೆ. ಕೆಲ ಲೋಪಗಳನ್ನು ಆರಂಭದಲ್ಲೇ ಸರಿಪಡಿಸಿಕೊಂಡಿದ್ದರೆ ಎನ್‌ಡಿಎ ಮೈತ್ರಿಕೂಟವನ್ನೇ ‘ಇಂಡಿಯಾ’ ಕೂಟ ಸೋಲಿಸಬಹುದಿತ್ತು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಪ್ರಮುಖವಾಗಿ, ಇಂಡಿಯಾ ಮೈತ್ರಿಕೂಟದ ರಚನೆಯಲ್ಲೇ ಗೊಂದಲಗಳಿದ್ದವು. ಅದಕ್ಕೆ ನಾಯಕ ಯಾರು ಎಂಬುದು ಸ್ಪಷ್ಟವಿರಲಿಲ್ಲ. ಹೀಗಾಗಿ ನಾಯಕತ್ವಕ್ಕಾಗಿ ಕಾಂಗ್ರೆಸ್‌, ಜೆಡಿಯು, ಟಿಎಂಸಿ, ಎನ್‌ಸಿಪಿ, ಡಿಎಂಕೆ, ಆಪ್‌ ಮುಂತಾದ ಸಾಕಷ್ಟು ಪಕ್ಷಗಳು ಒಳಗೊಳಗೇ ಪ್ರಯತ್ನ ನಡೆಸಿದ್ದವು. ಆ ಒಡಕು ಕ್ರಮೇಣ ದೊಡ್ಡದಾಗಿ, ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹೊರಹೋಗಿ ಎನ್‌ಡಿಎ ಸೇರಿಕೊಂಡಿತು. ಟಿಎಂಸಿಯ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಹೊರನಡೆದರು. ಹೀಗಾಗಿ ಸೀಟು ಹಂಚಿಕೆಯಲ್ಲಿ ಗೊಂದಲವಾಯಿತು. ಕೆಲ ಪ್ರಮುಖ ಮೈತ್ರಿಪಕ್ಷಗಳು ತಮ್ಮ ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾತ್ರ ಮೈತ್ರಿಯಲ್ಲಿ ಉಳಿದುಕೊಳ್ಳುವ ನಿಲುವು ತಾಳಿದವು. ಈ ಎಲ್ಲಾ ಕಾರಣಗಳಿಂದ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಂಘಟಿತ ಹೋರಾಟ ನಡೆಸಲು ಇಂಡಿಯಾ ಕೂಟಕ್ಕೆ ಸಾಧ್ಯವಾಗಲಿಲ್ಲ. ಅದರಿಂದಾಗಿ ಮ್ಯಾಜಿಕ್‌ ಸಂಖ್ಯೆಯ ಹತ್ತಿರಕ್ಕೆ ಬಂದು ಇಂಡಿಯಾ ಕೂಟ ಎಡವಿದೆ.