ದೇಹವನ್ನೂ ದೇವಾಲಯದಂತೆ ಪರಿಶುದ್ಧವಾಗಿ ಇಟ್ಟುಕೊಳ್ಳಿಜಗತ್ತನ್ನು ವ್ಯಾಪಿಸುವ ಭಗವಂತ, ಮನುಷ್ಯನ ದೇಹದಲ್ಲಿಯೂ ಇದ್ದು, ದೇವಾಲಯ ಎಷ್ಟು ಪವಿತ್ರವೋ ಅಷ್ಟೇ ಪವಿತ್ರವಾದುದು ಮನುಷ್ಯನ ದೇಹ. ದೇಹವನ್ನು ಪರಿಶುದ್ಧವಾಗಿ, ರೋಗರಹಿತವಾಗಿ ಇಟ್ಟುಕೊಂಡು, ದ್ವೇಷ, ಅಸೂಯೇ ತ್ಯಜಿಸಿ, ಪ್ರೀತಿ ವಾತ್ಸಲ್ಯದಿಂದ ಬದುಕಬೇಕಾದ್ದು ಮನುಷ್ಯ ಧರ್ಮವಾಗಿದೆ ಎಂದು ಮೈಸೂರು ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮನುಷ್ಯ ಭಗವಂತನನ್ನು ಪವಿತ್ರವಾಗಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿ ನಡೆ ಒಳಗೆ ನುಡಿ ತುಂಬಿ, ನುಡಿ ಒಳಗೆ ನಡೆ ತುಂಬಿ, ನಡೆನುಡಿಯಲ್ಲಿ ಪರಿಪೂರ್ಣತೆ ತುಂಬಿ ಸಾಮರಸ್ಯ ಕಾಣುತ್ತಾ, ಇವ ನಮ್ಮವ ಇವ ನಮ್ಮವ ಎಂದು ಪ್ರೀತಿಯಿಂದ ಕಾಣುವ ಭಾವನೆ ಬೆಳೆಸಿಕೊಂಡಾಗ ಮನುಷ್ಯ ಜೀವನ ಸಾರ್ಥಕವಾಗುತ್ತದೆ.