ಉಪನ್ಯಾಸಕನ ಕಿರುಕುಳ ಆರೋಪ: ವಿದ್ಯಾರ್ಥಿ ಆತ್ಮಹತ್ಯೆಉಪನ್ಯಾಸಕನ ವಿರುದ್ಧ ವಿದ್ಯಾರ್ಥಿಯೊಬ್ಬ ಸೆಲ್ಫಿ ವೀಡಿಯೋ ಮೂಲಕ ಗಂಭೀರ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದು, ಅಂತ್ಯ ಸಂಸ್ಕಾರದ ನಂತರ ಮೃತ ವಿದ್ಯಾರ್ಥಿ ಪೋಷಕರು ಮತ್ತು ಸಂಬಂಧಿಕರಿಂದ ಕಾಲೇಜು ಬಳಿ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆಯಿತು. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಲ್ಲಹಳ್ಳಿ ಗ್ರಾಮದ ಲಲಿತಮ್ಮ ಮತ್ತು ದೇವರಾಜು ದಂಪತಿಯ ಪುತ್ರ ಗಜೇಂದ್ರ(18) ಆತ್ಮಹತ್ಯೆ ಮಾಡಿಕೊಂಡಿರುವ ಡಿಪ್ಲೋಮಾ ವಿದ್ಯಾರ್ಥಿ. ಈತ ಚಿಕ್ಕಬಳ್ಳಾಪುರ ನಗರ ಹೊರವಲಯದ ಬಿಜಿಎಸ್ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ಮೆಕ್ಯಾನಿಕಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು. ವಿದ್ಯಾರ್ಥಿ ಗಜೇಂದ್ರ ಉಪನ್ಯಾಸಕ ಮುಂಜುನಾಥ್ ವಿರುದ್ಧ ಕಿರುಕುಳದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.